ಆಗಿನ್ನೂ ಆಟ ಆಡಿಕೊಂಡು ಓದಿಕೊಂಡು ಇರುವ ವಯಸ್ಸು. ಆಗಿನ ದಿನಚರಿ ಇನ್ನೂ ನೆನಪಿದೆ. ನಾನು ಸಾಯಂಕಾಲ ಕಾಲೇಜಿನಿಂದ ಬಂದಕೂಡಲೆ ಅಮ್ಮ ಮಾಡಿಕೊಡುತ್ತಿದ್ದ ಚಪಾತಿಯೋ ಅಥವಾ ಇನ್ಯಾವುದೋ ತಿಂಡಿಯನ್ನು ಲಗುಬಗೆಯಲ್ಲಿ ತಿಂದು ವಾಲೀಬಾಲ್ ಮೈದಾನಕ್ಕೆ ಓಡುವ ಧಾವಂತ. ಕತ್ತಲಾಗುವ ವರೆಗೆ ಆಡಿ, ಇತರೆ ಹುಡುಗರು ಅಲ್ಲೇ ಹರಟೆ ಹೊಡೆಯುತ್ತಿರುವಾಗ ಅಪ್ಪಯ್ಯ ಬಯ್ಯುತ್ತಾರೆ ಎಂಬ ಒಂದೇ ಕಾರಣಕ್ಕೆ ಮನೆಯತ್ತ ಓಡುತ್ತಿದ್ದೆ. ಕೈಕಾಲು ತೊಳೆದು ಭಜನೆ ಮಾಡಿ ನನ್ನ ರೂಮನ್ನು ಸೇರಿಕೊಳ್ಳುತ್ತಿದ್ದೆ. ಸಾಯಂಕಾಲ ತಿಂಡಿ ತಿಂದಿದ್ದರಿಂದ ರಾತ್ರಿ ಅಷ್ಟಾಗಿ ಹಸಿವಾಗಿರುತ್ತಲೇ ಇರುತ್ತಿರಲಿಲ್ಲ. ಮಲಗುವ ಮುನ್ನ ಅಮ್ಮನ ಒತ್ತಾಯಕ್ಕೆ ಸ್ವಲ್ಪ ಹಾಲು ಕುಡಿದು ಮಲಗುತ್ತಿದ್ದೆ. ಅಪ್ಪಯ್ಯ-ಅಮ್ಮ ಅವರಷ್ಟಕ್ಕೆ ಅವರು ಊಟ ಮಾಡುತ್ತಿದ್ದರು. ನಂತರ ಬೇಗ ಮಲಗಿಬಿಡುತ್ತಿದ್ದರು. ನಾನು ಯಾವುದಾದರೂ ಪಠ್ಯೇತರ ಪುಸ್ತಕವನ್ನು ಹಿಡಿದು ಓದುತ್ತಿದ್ದೆ ಮತ್ತು ಅವರು ಮಲಗಿದ ಮೇಲೆ ಒಂದೆರಡು ತಾಸು ಟಿವಿ ನೋಡಿ ಮತ್ತೆ ತುಂಬಾ ತಡವಾಗಿ ಮಲಗುತ್ತಿದ್ದೆ. ಸಹಜವಾಗಿ ಬೆಳಿಗ್ಗೆ ಮಾತ್ರ ಬೇಗ ಏಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಅಪ್ಪಯ್ಯ ಎಷ್ಟು ಎಬ್ಬಿಸಿದರೂ ನಾನು ಮಾತ್ರ ಏಳುತ್ತಿರಲಿಲ್ಲ. ಶಿಸ್ತಿನ ಅಪ್ಪಯ್ಯ ಮುನಿಸಿಕೊಳ್ಳುತ್ತಿದ್ದರು. ಅಪ್ಪಯ್ಯನ ಶಿಸ್ತಿನ ಮೇಲೆ ನನಗೂ ಕೋಪ ಬರುತ್ತಿತ್ತು. ಅವರಿಗೆ ಕೇಳದೇ ಹೋದ ಹಾಗೆ ಗೊಣಗಿಕೊಳ್ಳುತ್ತಿದ್ದೆ. ಅಪ್ಪಯ್ಯ ಮಾತ್ರ ಬಹು ಬೇಗ ಎದ್ದು ಸ್ನಾನ ಪೂಜೆಗಳನ್ನು ಮುಗಿಸಿ ತಮ್ಮ ಕೆಲಸಕ್ಕೆ ಹೊರಡುತ್ತಿದ್ದರು. ನಾನು ಅವರು ಹೋದ ನಂತರ ನಿಧಾನ ಎದ್ದು ಸ್ನಾನ ಮಾಡಿ, ಏನನ್ನೋ ತಿಂದು ಕಾಲೇಜಿಗೆ ಹೊರಡುತ್ತಿದ್ದೆ. ಮತ್ತೆ ವಾಪಸ್ ಬರುವುದು ಸಂಜೆ. ಒಟ್ಟಾರೆಯಾಗಿ ನಾನು ಮಾತ್ರ ಆಂತರ್ಯದಲ್ಲಿ ಏನನ್ನೋ ಕಳೆದುಕೊಳ್ಳುತ್ತಿರುವ ಭಾವನೆ ಗ್ರಹಿಸುತ್ತಲೇ ಇದ್ದೆ. ಏನೋ ಸರಿಯಾಗಿ ಆಗುತ್ತಿಲ್ಲ ಎಂದು ಮಾತ್ರ ಅನ್ನಿಸುತ್ತಿತ್ತು. ಮನೆಯಲ್ಲಿಯೇ ಇದ್ದರೂ ಎಲ್ಲಿಯೋ ಒಂದು ಅಂತರ ಏರ್ಪಟ್ಟಂತೆ. ಏನೋ ಒಂದು ಮಾತ್ರ ಸರಿಯಾಗಿ ನಡೆಯುತ್ತಿಲ್ಲವೆಂಬ ಭಾವನೆ.
ಒಂದು ದಿನ ಅಪ್ಪಯ್ಯ ಬಹಳ ಕೋಪದಿಂದಿದ್ದರು. ರಾತ್ರಿ ಊಟಕ್ಕೆ ಕೂತಿದ್ದರು. ನನ್ನನ್ನು ಗಟ್ಟಿಯಾಗಿ ಕೂಗಿದರು. ನಾನು ಹೆದರಿ ಬಂದು ಅವರೆದುರು ಕೂತೆ. ಅವರು ಆಗ ಹೇಳಿದ ಮಾತುಗಳ ಮಹತ್ವ ಇಂದು ನೆನಪಿಗೆ ಬರುತ್ತಿದೆ. “ನೋಡೂ, ನಿನ್ನ ದಿನಚರಿ ಸರಿಯಾಗಿಲ್ಲ. ನಿನ್ನದು ಓದು-ಆಟದ ವಯಸ್ಸು. ಅದೆರಡೂ ಬೇಕೇ ಬೇಕು. ಅದ್ಯಾವುದನ್ನೂ ಬಿಡು ಎಂದು ನಾನು ಹೇಳುವುದೇ ಇಲ್ಲ. ಆದರೆ ನಿನ್ನ ಈ ದಿನಚರಿ ಮನೆಯಲ್ಲಿಯ ಜನರಿಂದ ನಿನ್ನನ್ನು ದೂರ ಕರೆದು ನಿಲ್ಲಿಸಿಬಿಡುವ ಮುನ್ನ ನೀನು ಬದಲಾವಣೆ ಮಾಡಿಕೊಳ್ಳಬೇಕು. ನೀನು ಹೀಗೆಯೇ ಇರಬೇಕು ಎಂದು ನಾನೆಂದೂ ಎಂದವನಲ್ಲ. ನೀನು ಹೇಗಿರಬೇಕೆಂಬ ತಿಳುವಳಿಕೆ ನಿನ್ನಲ್ಲಿ ಮೂಡುವ ವಯಸ್ಸಿನಲ್ಲಿ ನಾನೇನೂ ಹೇಳದೇ ಹೋದಲ್ಲಿ ಅದರ ಪರಿಣಾಮಕ್ಕೆ ನಾನೇ ಹೊಣೆಯಾಗುತ್ತೇನೆ”. ನನಗೂ ಕೂಡ ಹಾಗೆಯೇ ಅನ್ನಿಸುತ್ತಿತ್ತೇನೋ. “ಹೌದು ಅಪ್ಪಯ್ಯ, ಯಾಕೋ ನನಗೂ ಹಾಗೆಯೇ ಅನಿಸುತ್ತಿದೆ.” ಎಂದು ಒಪ್ಪಿಸಿಕೊಂಡೆ. ಇಷ್ಟು ಹೇಳಿದ ಅಪ್ಪಯ್ಯನವರಲ್ಲಿ ಇದಕ್ಕೊಂದು ಪರಿಹಾರವಿದೆ ಎಂಬ ನಿರೀಕ್ಷೆಯಲ್ಲಿ ಮುಖವೆತ್ತಿ ಅವರ ಮುಖ ನೋಡಿದೆ. “ನೀನು ತಪ್ಪುತ್ತಿರುವುದು ನಿಜ. ಒಂದೇ ಬದಲಾವಣೆಯಾಗಬೇಕು. ಪ್ರತೀ ದಿನ ಮನೆಯವರೆಲ್ಲ ತಿಂಡಿ ತಿನ್ನುವಾಗ ಮತ್ತು ಊಟಮಾಡುವಾಗ ನೀನು ಬಂದು ಕೂಡಲೇ ಬೇಕು. ಅಷ್ಟೇ…ನಿನ್ನ ಊಟ ಮತ್ತು ತಿಂಡಿ ಮನೆಯವರೊಟ್ಟಿಗಾಗಬೇಕು” ಎಂದು ಸುಮ್ಮನಾದರು. ನಾನು ಕಣ್ಣೊರೆಸಿಕೊಂಡೆ.
ನಮ್ಮಲ್ಲಿಯ ಗಾದೆ ಹೀಗಿದೆ ” ಸಂಗತಿ ರುಚಿಯೋ, ಸಕ್ಕರೆ ರುಚಿಯೋ” ಅಂದರೆ, ಸಕ್ಕರೆಗಿಂತ ರುಚಿ ಎಲ್ಲರೂ ಕೂಡಿದಾಗ ; ಕೂಡಿ ಉಂಡಾಗ. ಭಾರತೀಯತನದಲ್ಲಿ ಮನುಷ್ಯನ ಸಮಾಜ ಪರಿಕಲ್ಪನೆಯ ಭದ್ರ ಅಂಶಗಳಿಗೆ ಇನ್ನೂ ಮಹತ್ವ ಉಳಿದಿರುತ್ತದೆ. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿ ಎಂದು ಹೊಗಳಿಕೊಳ್ಳುವುದು ಸಾಧ್ಯವಾಗಿದೆ. ಕಾಡ ಮನುಷ್ಯ ಸಾಮಾಜಿಕವಾಗಲು ಕಲಿತುಕೊಂಡದ್ದು ಗುಂಪಿನಲ್ಲಿ ಬದುಕಲು ಶುರುವಿಟ್ಟುಕೊಂಡಾಗ. ಆದರೆ ಇತ್ತೀಚೆಗೆ ಇದು ಕೇವಲ ಹೊಟ್ಟೆಪಾಡಿನ ವಿಷಯವಾಗಿದೆ. ಮನುಷ್ಯನಾದ ನಮಗೆ ಊಟ ಕೇವಲ ಹೊಟ್ಟೆ ತುಂಬಿಕೊಳ್ಳುವ ವಿಷಯವಲ್ಲ ಎನ್ನುವ ಅರಿವಿನ ಅವಷ್ಯಕತೆಯಿದೆ. ರಾತ್ರಿ ತಡವಾಗಿ ಮನೆಗೆ ಬಂದು ತ್ರೀಫ಼ೋರ್ಥ್ ಸಿಕ್ಕಿಸಿಕೊಂಡು ಅಮ್ಮನನ್ನು ಸ್ವಲ್ಪ ಮಾತನಾಡಿಸಿ ತಟ್ಟೆಗೆ ಎಲ್ಲವನ್ನೂ ಸುರಿದು (ನಮ್ಮ ಕಡೆ ಮಿಸಾಳು ಭಾಜಿ ಎನ್ನುವ ತಿಂಡಿಯೊಂದಿದೆ) ಹಾಲಿಗೆ ಬಂದು ಇಂಗ್ಲಿಷ್ ನಿವ್ಸ್ ಚ್ಯಾನಲ್ಲನ್ನು ಶೂನ್ಯದಲ್ಲಿ ನೋಡುತ್ತ ಊಟ ಮಾಡೂವುದು ಒಂದು ಪ್ಯಾಷನ್. ಯಾರೇ ಬಂದು ಮಾತನಾಡಿಸಿದರೂ ಮೊಬೈಲ್ ನಲ್ಲಿ ಏನನ್ನೋ ಒತ್ತುತ್ತ ಅವರಿಗೆ ಸುಮಾರಾದ ಉತ್ತರ. ಎಲ್ಲೋ ವಾರಕ್ಕೊಮ್ಮೆ ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡಿದರೆ ಅದೇ ದೊಡ್ಡದು. ಹಾಗಂತ ಅದೇ ಮನುಷ್ಯ ಪಾರ್ಟಿ ಪ್ರಿಯ. ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋಗುತ್ತಲೇ ಇರುವಾತ ಮನೆಯಲ್ಲಿ ಮಾತ್ರ ಏಕಾಂಗಿ ಊಟಗಾರ. ಅದಕ್ಕೇ ಹಲವರಿಗೆ ಮನೆಯವರಿಗಿಂತ ಸ್ನೇಹಿತರೇ ಅಚ್ಚುಮೆಚ್ಚು. ತಪ್ಪುತ್ತಿರುವುದೇ ಅಲ್ಲಿ. ನಮಗೆ ಅರಿವಿಲ್ಲದೆಯೇ ಕುಟುಂಬದಿಂದ ದೂರ ಸರಿಯುತ್ತ ಸಾಗುವಾಗ ಅದನ್ನು ಗ್ರಹಿಸದೇ ಹೋದಲ್ಲಿ ನಾವು ಮತ್ತೆ ಬದಲಾಗಲು ಸಾಧ್ಯವಾಗದ ಹಂತಕ್ಕೆ ಅತೀ ಬೇಗನೆ ತಲುಪಿಬಿಡುತ್ತೇವೆ. ಅದೆಲ್ಲದರ ನಡುವೆ ಅದೇನನ್ನೋ ತಿಳಿಯದೇ ಕಳೆದುಕೊಂಡುಬಿಡುತ್ತೇವೆ. ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ಅಂತರವೇ ಇಂಥಹ ಚಿಕ್ಕ ಚಿಕ್ಕ ವಿಷಯಗಳು ಹುಟ್ಟಿಹಾಕುವ ದೊಡ್ಡ ದೊಡ್ಡ ಅಂತರಗಳು. ಈ ಅಂತರಗಳನ್ನು ಅರಿಯದೇ ಹೋದಲ್ಲಿ ನಾವು ಜಾನುವಾರುಗಳಂತೆ ವರ್ತಿಸಲು ಶುರುವಿಟ್ಟುಕೊಳ್ಳುತ್ತೇವೆ. ಕೆಲವೊಂದು ಸೂಕ್ಷ್ಮಗಳು ನಮ್ಮ ಕೌಟುಂಬಿಕ ಸಂಬಂಧಗಳನ್ನು ಬಹುವಾಗಿ ನಿಗ್ರಹಿಸುತ್ತವೆ. ಪ್ರತೀ ದಿನ ಯಾವಾಗಲೂ ಮನೆಯವರೆಲ್ಲ ಸೇರಿ ಒಟ್ಟಿಗೆ ಊಟ ಮಾಡಿ. ಸಾಧ್ಯವಾದಲ್ಲಿ ಒಂದು ಊಟವಾದರೂ ಕೂಡಿ ಮಾಡಿ ಅಥವಾ ಕೊನೆಯಲ್ಲಿ ಒಂದು ತಿಂಡಿ ಒಟ್ಟಿಗಾಗಲಿ. ಸಾಧ್ಯವಿಲ್ಲವೆನ್ನುವ ಯಾವುದೇ ಸಣ್ಣ ಸಬೂಬು ನಿಮ್ಮನ್ನು ಸಮಾಧಾನಪಡಿಸದಿರಲಿ. ಬದಲಾವಣೆಯನ್ನು ನನಗೆ ಹೇಳಿ.
ಮನುಕುಲದೆಡೆಗಿನ ಒಂದಿಷ್ಟು ಕಾಳಜಿಯೊಂದಿಗೆ
-ಶಿಶಿರ ಹೆಗಡೆ.