ಮೊನ್ನೆ ಒಬ್ಬ ಸಂಬಂಧಿಕರ ಮನೆಗೆ ಹೋಗಿದ್ದೆ….

31 05 2012

ಮೊನ್ನೆ ಒಬ್ಬ ಸಂಬಂಧಿಕರ ಮನೆಗೆ ಹೋಗಿದ್ದೆ. ಮನೆಯೊಳಗೆ ಹೊಕ್ಕ ಕೂಡಲೆ ಒಂದು ಸುಮಧುರ ಪರಿಮಳ ಹರಿದುಬಂದು ಮನಸ್ಸೆಲ್ಲ ಅಹ್ಲಾದಕರವಾಗಿ ಅರಳಿತ್ತು. ಅವರ ಸ್ವಾಗತ ಸ್ವಲ್ಪ ಜಾಸ್ತಿಯೇ ಎಂಬಂತಿದ್ದರೂ ಅಷ್ಟೋಂದು ಕಿರಿಕಿರಿಯಾಗುವಷ್ಟಿರಲಿಲ್ಲ. ಹೋದಕೂಡಲೆ ತಂಪಾದ ನೀರನ್ನು ತಂದು ಮುಂದಿಟ್ಟರು. ಗುಟುಕರಿಸಿ ಮಾತನಾಡಲು ಶುರುವಿಟ್ಟುಕೊಂಡೆವು. ಸುದ್ದಿ ಲೋಕಾಭಿರಾಮವಾಗಿ ಎಲ್ಲೆಲ್ಲೋ ಸುತ್ತಿ ಅವರ ೧೪ ವಯಸ್ಸಿನ ಮಗನ ವಿಷಯಕ್ಕೆ ಬಂದು ನಿಂತುಕೊಂಡಿತು. ಮಗನನ್ನು ಹೊಗಳಿದ್ದೇ ಹೋಗಳಿದ್ದು. ಹೊಗಳಿಕೆಗೆ ಕಾರಣ ಅವರ ಮಗನೆಡೆಗಿನ ಅಪಾರ ಪ್ರೀತಿ ಎಂದಂದುಕೊಂಡು ನಾನು ಸ್ವಲ್ಪ ಸಹಿಸಿಕೊಂಡೆ. ಆದರೆ ಅಷ್ಟರಲ್ಲೇ ಕಿರಿಕಿರಿಯೆಂದೆನಿಸಿ ನನ್ನೊಟ್ಟಿಗೆ ಬಂದ ನನ್ನ ಸಂಬಧೀ ಗೆಳೆಯ ವಿಷಯಾಂತರಕ್ಕೆ ಪ್ರಯತ್ನಿಸುತ್ತಲೇ ಇದ್ದ. ಆದರೆ ಆ ಮನುಷ್ಯ ಮಾತ್ರ ಅದಕ್ಕೆ ಅವಕಾಶವನ್ನೇ ನೀಡದೇ ಹೊಗಳು ಭಠನಂತೆ ಹೊಗಳುತ್ತಲೇ ಸಾಗಿದ. ಆಮೇಲೆ ಅನಿವಾರ್ಯವಾಗಿ ನಾನು ಕೂಡ ಮಗನಿಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳಬೇಕಾಯಿತು. ನನ್ನೊಟ್ಟಿಗಿದ್ದ ಗೆಳೆಯನತ್ತ ಗಮನವನ್ನೇ ಹರಿಸದೇ ನಾನು ಒಂದು ಪ್ರಶ್ನೆ ಅವರ ಮಗನ ಬಗ್ಗೆ ಕೇಳಿದ್ದಕ್ಕೆ ಓತಪ್ರೋತವಾಗಿ ಹೊಗಳುತ್ತಲೇ ಸಾಗಿತ್ತು ಅವರ ಸುದ್ದಿ. ಬಿಸಿ ಬಿಸಿ ಚಹಾ ಕೊಟ್ಟ ಅವರ ಮನೆಯೋಡತಿ ಕೂಡ ಅದೇ ’ಮಗನನ್ನು ಹೊಗಳುವ ರೋಗ’ಕ್ಕೆ ತುತ್ತಾದದ್ದು ಕಂಡು ಮಾತ್ರ ನಾನು ಸ್ವಲ್ಪ ಅಧೀರನಾದದ್ದು ಸುಳ್ಲಲ್ಲ. ಒಂದೇ ಒಂದು ಪ್ರಶ್ನೆ ಕೇಳಿದ್ದು ಆ ಮಾತ ಪಿತೃರನ್ನು ಈ ಪರಿಯಾಗಿ activate ಮಾಡುತ್ತದೆಯೆಂದು ನಾನು ಅಂದುಕೊಂಡಿರಲೇ ಇಲ್ಲ. ಏಳನೇ ಕ್ಲಾಸಿನಲ್ಲಿ ೮೫% ಅಂಕಪಡೆದ ಆ ಬಾಲ ಪ್ರತಿಭೆಯನ್ನು ಕಾಣದೇ, ಅವನೆಲ್ಲಿ ಎಂದು ಕೇಳಿದೆ. ಅದಕ್ಕೆ ಯಜಮಾನರು, ’ಟ್ಯೂಶನ್ನಿಗೆ ಹೋಗಿದ್ದಾನೆ, ಇನ್ನೇನು ಬರಬಹುದು’ ಮಾತು ಇಷ್ಟಕ್ಕೇ ನಿಲ್ಲದೇ ಟ್ಯೂಶನ್ನಿನ ಬಗ್ಗೆ ಮತ್ತು ಆ ಟ್ಯೂಶನ್ ಸೆಂಟರಿನ ಇತಿಹಾಸದ ಬಗ್ಗೆ ಇನ್ನಷ್ಟು ಪುರಾಣವನ್ನು ಬಿಗಿಯಲು ಶುರುವಿಟ್ಟುಕೊಂಡರು.

ಅಷ್ಟರಲ್ಲಿ ಡೋರ್ ಬೆಲ್ ಬಡಿದುಕೊಂಡಿತು. ’ಅದೇ.. ಅವನೇ ಬಂದ’ ಎಂದು ಎದ್ದು ಹೋಗಿ ಬಾಗಿಲು ತೆಗೆದು ’ಯಾರು ಬಂದಿದ್ದಾರೆ ನೋಡು’ ಎಂದರು. ಅವನು ಬಾಗಿಲಿನಿಂದ ಈಚೆಗೆ ಬಂದು ನಮ್ಮನ್ನು ಆತ್ಮೀಯತೆಯಿಂದ ಮಾತನಾಡಿಸುವ ನಿರೀಕ್ಶೆಯಲ್ಲಿ ನಾವಿದ್ದೆವು. ಆದರೆ ಹಾಗಾಗಲೇ ಇಲ್ಲ. ಆತ ನಮ್ಮ್ಯಾರ ಮುಖವನ್ನೂ ನೋಡಲಿಲ್ಲ, ಅಥವಾ ನೋಡಿದನೋ ಇಲ್ಲವೋ ನಮಗೆ ತಿಳಿಯಲಿಲ್ಲ. ನೇರವಾಗಿ ತನ್ನ ರೂಮಿಗೆ ಹೊಕ್ಕು ಬಾಗಿಲು ಜಡಿದುಕೊಂಡ. ಇದರಿಂದ ಸ್ವಲ್ಪವೂ ವಿಚಲಿತರಾಗದ ಅವನ ಅಪ್ಪ ’ಅವನಿಗೆ ತುಂಬಾ ನಾಚಿಕೆ’ ಎಂದು ಸಮಜಾಯಿಷಿ ಕೊಟ್ಟದ್ದನ್ನು ನಾವು ನಂಬಿಕೊಳ್ಳಲೇ ಬೇಕಾಯಿತು. ಹಾಗಾಗಿ ಅದನ್ನೇ ಸತ್ಯವೆಂದು ನಂಬಿಕೊಂಡೆವು. ಕೆಲವೇ ಕ್ಷಣಗಳಲ್ಲಿ ಬಾಗಿಲು ತೆರೆದುಕೊಂಡು ಈಚೆಗೆ ಬಂದ ಮಾಣಿ ನನ್ನೆದುರಿಗೇ ಬಂದು ಕುಳಿತುಕೊಂಡಾಗ ’ಹಾಯ್’ ಎಂದೆ. ಅದಕ್ಕೆ ಅನಿವಾರ್ಯವಾಗಿ ಒಂದು ನಗು ಕೂಡ ಬೀರದ ಹುಡುಗ, ಅಲ್ಲೇ ಇದ್ದ ರಿಮೋಟ್ ಕಂಟ್ರೋಲ್ ಅನ್ನು ಅತ್ತುಕೊಂಡು ಅದ್ಯಾವುದೋ ಕಾರ್ಟೂನ್ ಚ್ಯಾನಲ್ ಅನ್ನು ಹಚ್ಚಿಕೊಂಡ. ಅವನ ಅಪ್ಪ ’ಅವನು ಈ ಕಾರ್ಯಕ್ರಮವನ್ನು ಯವತ್ತೂ ತಪ್ಪಿಸಿಕೊಳ್ಳುವುದೇ ಇಲ್ಲ, ಇದು ಬಹಳ ಮಜವಾಗಿರುತ್ತದೆ’ ಎಂದು ನಾವೂ ಅನಿವಾರ್ಯವಾಗಿ ಟಿ.ವಿ.ಯತ್ತ ನೋಡುವಂತೆ ಮಾಡಿದರು.

ಸ್ವಲ್ಪವೇ ಸಮಯದಲ್ಲಿ ನಾನು ಮತ್ತು ಗೆಳೆಯ ಕಿರಿಕಿರಿಯಾದಂತೆನಿಸಿ ’ಸರಿ ಹಾಗಾದರೆ..’ ಎಂದು ಹೊರಡುವುದಕ್ಕೆ ಪೀಠಿಕೆ ಹಾಕಿದೆವು. ಬಾಗಿಲ ಬಳಿ ಬಂದವನಿಗೆ ಯಾಕೋ ತಡೆದುಕೊಳ್ಳಲಾಗದೆ ’ಯಾರಾದರೂ ಮನೆಗೆ ಬಂದಲ್ಲಿ ಅವರನ್ನು ಮಾತನಾಡಿಸುವ ಕನಿಷ್ಟ ಸಂಸ್ಕಾರವನ್ನು ನೀವು ಮಗುವಿಗೆ ಹೇಳಿಕೊಟ್ಟರೆ ಚೆನ್ನಗಿರುತ್ತಿತ್ತು’ ಎಂದು ಹೇಳಿಯೇ ಬಿಟ್ಟೆ. ಬಹುಷ: ಈ ಮಾತನ್ನು ಅಲ್ಲಿದ್ದ ಆ ಮಗುವಿನ ಅಪ್ಪ, ಅಮ್ಮ ಮತ್ತು ನನ್ನೊಂದಿಗಿದ್ದ ಗೆಳೆಯ ನಿರೀಕ್ಶೆಯೇ ಮಾಡಿರಲಿಲ್ಲ. ಅದಕ್ಕೆ ಅವರಿಂದ ಯಾವುದೇ ಉತ್ತರವನ್ನು ನಿರೀಕ್ಷಿಸದೇ ಅಲ್ಲಿಂದ ಹೊರಟು ಬಿಟ್ಟೆ. ಅದ್ಯಾಕೋ ಮೊದಲ ಬಾರಿಗೆ, ಹೊರಡುವ ಸಮಯದಲ್ಲಿ, ಅವರನ್ನು ನಮ್ಮ ಮನೆಗೆ ಅಹ್ವಾನಿಸಲು ಮನಸೇ ಆಗಲಿಲ್ಲ. ಬಹುಷ: ನನ್ನನ್ನು ಆವರು ಇನ್ನೆಂದೂ ಮನೆಗೆ ಕರೆಯುವುದಿಲ್ಲವೆಂದು ಅಂದುಕೊಂಡು ನನ್ನ ಕಾರ್ ಹತ್ತಿ ಸೀಟ್ ಬೆಲ್ಟ್ ಸಿಕ್ಕಿಸಿಕೊಂಡೆ.

ಕೊನೆಯಲ್ಲಿ, ಜಾಣರಾದ ನಿಮಗೆ ಈ ಘಟನೆಯನ್ನು ಅವಲೋಕಿಸುವ ಮತ್ತು ಇಲ್ಲಿ ಕೊನೆಯಲ್ಲಿ ಹೇಳದೇ ಹೋದ ಮಾತುಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯಿದೆಯೆಂಬ ಕಾರಣದಿಂದ ಈ ಲೇಖನವನ್ನು ಇಲ್ಲಿಗೇ ಮುಗಿಸುತ್ತಿದ್ದೇನೆ.

- ಶಿಶಿರ ಹೆಗಡೆ





ಫಾರಿನ್ ರಿಟರ್ನ್ ಜನಸಾಮಾನ್ಯ vs ಫಾರಿನ್ ಟೂರ್ ರಿಟರ್ನ್ ಮಂತ್ರಿ ಮಹೋದಯ

23 01 2012

ಫಾರಿನ್ ರಿಟರ್ನ್ ಗಳು ಆಗಾಗ ಅಲ್ಲಿನ ವ್ಯವಸ್ಥೆ ಮತ್ತು ಇಲ್ಲಿನ ಅವ್ಯವಸ್ಥೆಗಳನ್ನು ಪ್ರಸ್ತಾಪಿಸುವುದುಂಟು. ಹಾಗೆಲ್ಲ ಪ್ರಸ್ತಾಪಿಸಿದಾಗ ನಮಗೆ ಮಾತ್ರ ಅದೆಲ್ಲಿಯೋ ಅಡಗಿ ಕುಳಿತ ದೇಶಾಭಿಮಾನ ಎದುರಿಗೆ ಬಂದು ನಮ್ಮನ್ನೇ ಕೆಣಕುತ್ತವೆ. ವಿದೇಶದಲ್ಲಿನ ವ್ಯವಸ್ಥೆಯನ್ನು ಹೊಗಳಿದಾಗ ಮತ್ತು ನಮ್ಮ ಅದೇ ವ್ಯವಸ್ಥೆಯನ್ನು ತೆಗಳಿದಾಗ ದೇಶಪ್ರೇಮ ನಮ್ಮೆದುರಿಗೆ ಧುತ್ತೆಂದು ನಿಲ್ಲುತ್ತದೆ. ಜಾಸ್ತಿ ಏನಾದರು ಆ ಫಾರಿನ್ ರಿಟರ್ನ್ ಹೇಳಿದರೆ ಆತನನ್ನೆ ಏನದರೂ ಹೀಯಾಳಿಸುತ್ತೇವೆ ಇಲ್ಲವೇ “ನಮ್ ದೇಶ ಹೀಗೆ ಮಾರಾಯಾ” ಎಂದು ಹೇಗಾದರೂ ಬಾಯಿಮುಚ್ಚಿಸುತ್ತೇವೆ. ಅಲ್ಲೊಂದು ಸಮಸ್ಯೆಯ ಬಗ್ಗೆ ಚರ್ಚೆ ನಡೆಯದೇ ಹೋಗುತ್ತದೆ. ಮೂಲದಲ್ಲಿ ಸಮಸ್ಯೆಯಿಂದ ನಾವು ದೂರ ಸರಿಯಲು ಪ್ರಯತ್ನಿಸುತ್ತೇವೆಯೇ ಅಥವಾ ಸಮಸ್ಯೆ ಭಾರತದ ಮಟ್ಟಿಗೆ ಬಗೆಹರಿಯದ ಸಮಸ್ಯೆಯೆಂದು ಒಪ್ಪಿಕೊಂಡುಬಿಡುತ್ತೇವೆಯೇ ?

ನಮ್ಮ ರಾಜಕಾರಣಿಗಳು ಪದೇ ಪದೆ ವಿದೇಶ ಪ್ರಯಾಣ ಮಾಡುತ್ತಿರುತ್ತಾರೆ. ವಿದೇಶಕ್ಕೆ ಹೋಗಿ ಅಲ್ಲಿನ ಕನ್ನಡಿಗರ ಸಂಘಗಳು ಇಟ್ಟುಕೊಳ್ಳುವ ಒಂದಿಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೊದಲೇ ನಿಯೋಜಿಸಲ್ಪಟ್ಟ ಒಂದಿಷ್ಟು ಪ್ರವಾಸಿತಾಣಗಳಿಗೆ ಭೇಟಿ ಕೊಡುತ್ತಾರೆ. ಒಂದಿಷ್ಟು ದಿನ ಗುಂಡುಹಾಕಿಕೊಂಡು ಮಜಾ ಮಾಡಿ ಹಿಂದಿರುಗುತ್ತಾರೆ. ಇನ್ನೂವರೆಗೆ ನಾನು ಯಾವುದೇ ಮಂತ್ರಿಯೊಬ್ಬ ಒಂದು ಚಿಕ್ಕ ವಿಚಾರವನ್ನೂ ವಿದೇಶದಲ್ಲಿ ಅರಿತು ಕಲಿತು ಇಲ್ಲಿಗೆ ಬಂದು ಅದನ್ನು ಅನುಷ್ಠಾನಗೋಳಿಸಿದ್ದು ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಹೀಗಿರುವಾಗ ಶಾಸಕರ ಮತ್ತು ಮಂತ್ರಿಗಳ ವಿದೇಶಪ್ರಯಾಣದ ಔಚಿತ್ಯವೇನು ? ಈಗಿತ್ತಲಾಗೆ ನಮ್ಮ ಸಮೂಹ ಮಾಧ್ಯಮಗಳು ಇದೇ ಪ್ರಶ್ನೆಯನ್ನು ಮಂತ್ರಿಗಳ ಮುಂದೆ ಇಡುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಆದ್ದರಿಂದಲೇ ಏನೋ, ಯಾವುದೇ ಮಾಧ್ಯಮಗಳಿಗೆ ಸುಳಿವು ಕೊಡದೇ ಹಲವು ಮಂತ್ರಿಗಳು ಈಗೀಗ ವಿದೇಶಕ್ಕೆ ಹೋಗಿ ಬರುತ್ತಿದ್ದಾರೆ.

ಮುಖ್ಯಮಂತ್ರಿಯಾದವರು ಈ ಮಂತ್ರಿಗಳ ವಿದೇಶ ಪ್ರಯಾಣಕ್ಕೆ ಅಡ್ಡಗಾಲು ಹಾಕುವಂತಿಲ್ಲ. ಬೇಕಾಗಲೀ ಅಥವಾ ಸಖಾ ಸುಮ್ಮನೆಯಾಗಲಿ, ಶಾಸಕರ ಮಂತ್ರಿಗಳ ವಿದೇಶೀ ಪ್ರಯಾಣವನ್ನು ಅನುಮೋದಿಸಲೇ ಬೇಕು. ಇಲ್ಲದಿದ್ದರೆ ಅಲ್ಲೊಂದು ಅಸಮಾಧಾನ, ಭಿನ್ನಮತ ಎದುರಿಸಬೇಕಾಗುವ ಮುಖ್ಯಮಂತ್ರಿಯಾದರೂ ಇನ್ನೇನು ಮಾಡಿಯಾರು ? At least , ಮಂತ್ರಿಯಾದವನು ಒಂದೇ ಒಂದು ಉತ್ತಮ ಕಾರ್ಯವನ್ನು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಇಲ್ಲಿಗೆ ಬಂದು ಅನಿಷ್ಠಾನ ಮಾಡಿದ್ದಿದ್ದರೆ ಇಷ್ಟೋತ್ತಿಗೆ ಈ ದೇಶ ಇನ್ಹ್ಯಾಗೋ ಇರುತ್ತಿತ್ತು. ಈ ಮಂತ್ರಿಗಳ ವಿದೇಶೀ ಪ್ರಯಾಣವನ್ನು ಪ್ರಶ್ನಿಸಿವವರ್ಯಾರು ? ವಿದೇಶಕ್ಕೆ ಹೋಗಿ ಬಂದ ಮಂತ್ರಿ ಎಂದಾದರೂ ತಾನಿಂತದ್ದೊಂದನ್ನು ನೋಡಿ ಬಂದೆ, ಅದನ್ನು ಇಲ್ಲಿ ಅನುಷ್ಠಾನ ಮಾಡಬಹುದು ಎಂದು ಒಮ್ಮೆಯಾದರೂ ಉಸುರಿದ್ದಾನೆಯೇ? ಪ್ರಜೆಗಳ ಹಣದಲ್ಲಿ ವಿದೇಶಕ್ಕೆ ಹೋಗಿ ಮಜಾ ಮಾಡಿ ಬರುವ ಈ ಮಂತ್ರಿಗಳಿಗೆ ಪಾಪ ಪ್ರಜ್ನೆ ಕಾಡುವುದೇ ಇಲ್ಲವೇ ?

ಯಾಕೆ ನಮ್ಮ ಮಂತ್ರಿಗಳಿಗೂ ಮತ್ತು ಫಾರಿನ್ ರಿಟರ್ನ್ ಗಳಿಗೂ ಒಮ್ಮೆ ಹೋಲಿಸಿ ನೋಡಬಾರದು ? ಫಾರಿನ್ ರಿಟರ್ನುಗಳು ಬೇರೆ ಯಾರೂ ಅಲ್ಲವಲ್ಲ. ಅವರೂ ಕೂಡ ನಮ್ಮ ನಿಮ್ಮಂತೆಯೇ ಇದೇ ದೇಶದ ಒಬ್ಬ ಸಾಮಾನ್ಯ ಪ್ರಜೆಯೇ. ಅವಕಾಶ ಮತ್ತು ವಿದ್ಯೆಯಿಂದ ನಮ್ಮಲ್ಲಿಗಿಂತಲೂ ಉತ್ತಮವಾದ ಇನ್ನೊಂದು ವ್ಯವಸ್ಥೆಯಲ್ಲಿ ಅವರು ಕೆಲಸಕ್ಕೋ ಅಥವಾ ವಾಣಿಜ್ಯೋದ್ದೇಶಕ್ಕೋ ತೆರಳಿ ವಾಪಸ್ ಬಂದವರಷ್ಟೇ. ಅದರಲ್ಲಿ ಯಾವುದೇ ತಪ್ಪು ನನಗಂತೂ ಕಾಣಿಸುತ್ತಿಲ್ಲ. ಇಷ್ಟಕ್ಕೂ ಎಲ್ಲ ಫಾರಿನ್ ರಿಟರ್ನ್ ಗಳೂ ತಾನು ವಿದೇಶಕ್ಕೆ ಹೋಗಿ ಹಿಂದಿರುಗಿ ಬಂದವನೆನ್ನುವ ಅಹಂ ನಿಂದ ಅಲ್ಲಿನ ವ್ಯವಸ್ಥೆಯನ್ನು ಹೊಗಳುವುದಾಗಲೀ ಅಥವಾ ಇಲ್ಲಿನ ವ್ಯವಸ್ಥೆಯನ್ನು ತೆಗಳುವುದಾಗಲೀ ಮಾಡುತ್ತಾನೆಯೇ ? ಖಂಡಿತ ಒಪ್ಪುವ ಮಾತಲ್ಲ. ಅಲ್ಲೊಂದು ಅಸಮಾಧಾನ ಹುಟ್ಟಿಕೊಂಡಿರುವುದು ತನ್ನ ದೇಶದ ಮಟ್ಟಿಗೆ ಆತ ಇಟ್ಟುಕೊಂಡಿರುವ ಪ್ರೇಮದಿಂದಾಗಿ ಅಲ್ಲವೇ. ಯಾಕೆ ನಮ್ಮ ದೇಶವೂ ಹಾಗಾಗಬಾರದು ಎಂಬ ಒಂದು ಹಂಬಲದಿಂದಾಗಿ ಆಡಿದ ಮಾತುಗಳಲ್ಲವೇ ? ಆತನ ಮಾತುಗಳು ನಮ್ಮ ಮನಸ್ಸಿನಲ್ಲೊಂದು ನಿರಾಸೆಯನ್ನು ಮೂಡಿಸುತ್ತವೆ, ಅದಕ್ಕೆ ಕೂಡ ಕಾರಣ ನಮ್ಮಲ್ಲಿನ ದೇಶದ ಬಗೆಗಿನ ಉತ್ಕಟ ಪ್ರೇಮವೇ ಹೊರತು ಇನ್ನೊಂದಲ್ಲ. ಹೀಗೆ ಒಬ್ಬ ಸಾಮಾನ್ಯ ಪ್ರಜೆಯೊಬ್ಬ ವಿದೇಶದಲ್ಲಿ ಅಲ್ಪಕಾಲ ನೆಲೆಸಿ ಅಲ್ಲಿ ಓಡಾಡಿದಾಗಲೆಲ್ಲ ಆತ ಹೆಜ್ಜೆ ಹೆಜ್ಜೆಗೂ ತನ್ನ ದೇಶದ ಬಗ್ಗೆಯೇ ವಿಚಾರ ಮಾಡುತ್ತಿರುತ್ತಾನೆ. ಒಂದು ಉತ್ತಮ ವ್ಯವಸ್ಥೆಯನ್ನು ನೋಡಿದಾಗಲೆಲ್ಲ ಇದ್ಯಾಕೆ ನಮ್ಮ ದೇಶದಲ್ಲಿಲ್ಲವೆಂದು ಅಂದುಕೊಳ್ಳುತ್ತಾನೆ. ಯಾಕೆ ಹೀಗೊಂದು ಉತ್ತಮ ವ್ಯವಸ್ಥೆಯನ್ನು ನಮ್ಮದಾಗಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆಯೆಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತಿರುತ್ತಾನೆ. ಆದರೆ ಪ್ರಜೆಗಳ ದುಡ್ಡಿನಲ್ಲಿ ಪುಕ್ಕಟೆ ವಿದೇಶ ಸುತ್ತುವ ರಾಜಕಾರಣಿಗಳಿಗೆ ಈ ಪ್ರಶ್ನೆಯು ಏಳುವುದೇ ಇಲ್ಲವೇ ? ಯಾಕೆ ವಿದೇಶಕ್ಕೆ ಹೋದಾಗ ಅಲ್ಲಿನ ವ್ಯವಸ್ಥೆಯನ್ನು ಸವಿಯುತ್ತಲೇ ಕಾಲಹರಣ ಮಾಡಿಬಿಡುತ್ತಾರೆ ನಮ್ಮ ಮಂತ್ರಿವರ್ಯರು! ಅದೇ ಜನಸಾಮಾನ್ಯನಿಂದ ಮಂತ್ರಿ ಪದವಿಗೆ ಏರಿದ ಒಬ್ಬ ಮನುಷ್ಯ ರಾಜಕಾರಣವೆಂಬ ಹೊಲಸು ವ್ಯವಸ್ಥೆಯಿಂದ interval ಪಡೆಯಲು ವಿದೇಶ ಪ್ರಯಾಣ ಬೆಳೆಸುತ್ತಾನೆಯೇ ? ಈ ಮಂತ್ರಿಗಳನ್ನು ಪ್ರಶ್ನಿಸುವವರ್ಯಾರು ?

ಒಂದಿಷ್ಟು ವ್ಯವಸ್ಥೆಯ ಅವ್ಯವಸ್ಥೆಯ ಜಡ್ಡಿನ ಮೈದಡವುತ್ತ…
ಶಿಶಿರ ಹೆಗಡೆ





ಏಕಾಂಗಿಯಾಗುವ ಮುನ್ನ…

15 01 2012

ಆಗಿನ್ನೂ ಆಟ ಆಡಿಕೊಂಡು ಓದಿಕೊಂಡು ಇರುವ ವಯಸ್ಸು. ಆಗಿನ ದಿನಚರಿ ಇನ್ನೂ ನೆನಪಿದೆ. ನಾನು ಸಾಯಂಕಾಲ ಕಾಲೇಜಿನಿಂದ ಬಂದಕೂಡಲೆ ಅಮ್ಮ ಮಾಡಿಕೊಡುತ್ತಿದ್ದ ಚಪಾತಿಯೋ ಅಥವಾ ಇನ್ಯಾವುದೋ ತಿಂಡಿಯನ್ನು ಲಗುಬಗೆಯಲ್ಲಿ ತಿಂದು ವಾಲೀಬಾಲ್ ಮೈದಾನಕ್ಕೆ ಓಡುವ ಧಾವಂತ. ಕತ್ತಲಾಗುವ ವರೆಗೆ ಆಡಿ, ಇತರೆ ಹುಡುಗರು ಅಲ್ಲೇ ಹರಟೆ ಹೊಡೆಯುತ್ತಿರುವಾಗ ಅಪ್ಪಯ್ಯ ಬಯ್ಯುತ್ತಾರೆ ಎಂಬ ಒಂದೇ ಕಾರಣಕ್ಕೆ ಮನೆಯತ್ತ ಓಡುತ್ತಿದ್ದೆ. ಕೈಕಾಲು ತೊಳೆದು ಭಜನೆ ಮಾಡಿ ನನ್ನ ರೂಮನ್ನು ಸೇರಿಕೊಳ್ಳುತ್ತಿದ್ದೆ. ಸಾಯಂಕಾಲ ತಿಂಡಿ ತಿಂದಿದ್ದರಿಂದ ರಾತ್ರಿ ಅಷ್ಟಾಗಿ ಹಸಿವಾಗಿರುತ್ತಲೇ ಇರುತ್ತಿರಲಿಲ್ಲ. ಮಲಗುವ ಮುನ್ನ ಅಮ್ಮನ ಒತ್ತಾಯಕ್ಕೆ ಸ್ವಲ್ಪ ಹಾಲು ಕುಡಿದು ಮಲಗುತ್ತಿದ್ದೆ. ಅಪ್ಪಯ್ಯ-ಅಮ್ಮ ಅವರಷ್ಟಕ್ಕೆ ಅವರು ಊಟ ಮಾಡುತ್ತಿದ್ದರು. ನಂತರ ಬೇಗ ಮಲಗಿಬಿಡುತ್ತಿದ್ದರು. ನಾನು ಯಾವುದಾದರೂ ಪಠ್ಯೇತರ ಪುಸ್ತಕವನ್ನು ಹಿಡಿದು ಓದುತ್ತಿದ್ದೆ ಮತ್ತು ಅವರು ಮಲಗಿದ ಮೇಲೆ ಒಂದೆರಡು ತಾಸು ಟಿವಿ ನೋಡಿ ಮತ್ತೆ ತುಂಬಾ ತಡವಾಗಿ ಮಲಗುತ್ತಿದ್ದೆ. ಸಹಜವಾಗಿ ಬೆಳಿಗ್ಗೆ ಮಾತ್ರ ಬೇಗ ಏಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಅಪ್ಪಯ್ಯ ಎಷ್ಟು ಎಬ್ಬಿಸಿದರೂ ನಾನು ಮಾತ್ರ ಏಳುತ್ತಿರಲಿಲ್ಲ. ಶಿಸ್ತಿನ ಅಪ್ಪಯ್ಯ ಮುನಿಸಿಕೊಳ್ಳುತ್ತಿದ್ದರು. ಅಪ್ಪಯ್ಯನ ಶಿಸ್ತಿನ ಮೇಲೆ ನನಗೂ ಕೋಪ ಬರುತ್ತಿತ್ತು. ಅವರಿಗೆ ಕೇಳದೇ ಹೋದ ಹಾಗೆ ಗೊಣಗಿಕೊಳ್ಳುತ್ತಿದ್ದೆ. ಅಪ್ಪಯ್ಯ ಮಾತ್ರ ಬಹು ಬೇಗ ಎದ್ದು ಸ್ನಾನ ಪೂಜೆಗಳನ್ನು ಮುಗಿಸಿ ತಮ್ಮ ಕೆಲಸಕ್ಕೆ ಹೊರಡುತ್ತಿದ್ದರು. ನಾನು ಅವರು ಹೋದ ನಂತರ ನಿಧಾನ ಎದ್ದು ಸ್ನಾನ ಮಾಡಿ, ಏನನ್ನೋ ತಿಂದು ಕಾಲೇಜಿಗೆ ಹೊರಡುತ್ತಿದ್ದೆ. ಮತ್ತೆ ವಾಪಸ್ ಬರುವುದು ಸಂಜೆ. ಒಟ್ಟಾರೆಯಾಗಿ ನಾನು ಮಾತ್ರ ಆಂತರ್ಯದಲ್ಲಿ ಏನನ್ನೋ ಕಳೆದುಕೊಳ್ಳುತ್ತಿರುವ ಭಾವನೆ ಗ್ರಹಿಸುತ್ತಲೇ ಇದ್ದೆ. ಏನೋ ಸರಿಯಾಗಿ ಆಗುತ್ತಿಲ್ಲ ಎಂದು ಮಾತ್ರ ಅನ್ನಿಸುತ್ತಿತ್ತು. ಮನೆಯಲ್ಲಿಯೇ ಇದ್ದರೂ ಎಲ್ಲಿಯೋ ಒಂದು ಅಂತರ ಏರ್ಪಟ್ಟಂತೆ. ಏನೋ ಒಂದು ಮಾತ್ರ ಸರಿಯಾಗಿ ನಡೆಯುತ್ತಿಲ್ಲವೆಂಬ ಭಾವನೆ.

ಒಂದು ದಿನ ಅಪ್ಪಯ್ಯ ಬಹಳ ಕೋಪದಿಂದಿದ್ದರು. ರಾತ್ರಿ ಊಟಕ್ಕೆ ಕೂತಿದ್ದರು. ನನ್ನನ್ನು ಗಟ್ಟಿಯಾಗಿ ಕೂಗಿದರು. ನಾನು ಹೆದರಿ ಬಂದು ಅವರೆದುರು ಕೂತೆ. ಅವರು ಆಗ ಹೇಳಿದ ಮಾತುಗಳ ಮಹತ್ವ ಇಂದು ನೆನಪಿಗೆ ಬರುತ್ತಿದೆ. “ನೋಡೂ, ನಿನ್ನ ದಿನಚರಿ ಸರಿಯಾಗಿಲ್ಲ. ನಿನ್ನದು ಓದು-ಆಟದ ವಯಸ್ಸು. ಅದೆರಡೂ ಬೇಕೇ ಬೇಕು. ಅದ್ಯಾವುದನ್ನೂ ಬಿಡು ಎಂದು ನಾನು ಹೇಳುವುದೇ ಇಲ್ಲ. ಆದರೆ ನಿನ್ನ ಈ ದಿನಚರಿ ಮನೆಯಲ್ಲಿಯ ಜನರಿಂದ ನಿನ್ನನ್ನು ದೂರ ಕರೆದು ನಿಲ್ಲಿಸಿಬಿಡುವ ಮುನ್ನ ನೀನು ಬದಲಾವಣೆ ಮಾಡಿಕೊಳ್ಳಬೇಕು. ನೀನು ಹೀಗೆಯೇ ಇರಬೇಕು ಎಂದು ನಾನೆಂದೂ ಎಂದವನಲ್ಲ. ನೀನು ಹೇಗಿರಬೇಕೆಂಬ ತಿಳುವಳಿಕೆ ನಿನ್ನಲ್ಲಿ ಮೂಡುವ ವಯಸ್ಸಿನಲ್ಲಿ ನಾನೇನೂ ಹೇಳದೇ ಹೋದಲ್ಲಿ ಅದರ ಪರಿಣಾಮಕ್ಕೆ ನಾನೇ ಹೊಣೆಯಾಗುತ್ತೇನೆ”. ನನಗೂ ಕೂಡ ಹಾಗೆಯೇ ಅನ್ನಿಸುತ್ತಿತ್ತೇನೋ. “ಹೌದು ಅಪ್ಪಯ್ಯ, ಯಾಕೋ ನನಗೂ ಹಾಗೆಯೇ ಅನಿಸುತ್ತಿದೆ.” ಎಂದು ಒಪ್ಪಿಸಿಕೊಂಡೆ. ಇಷ್ಟು ಹೇಳಿದ ಅಪ್ಪಯ್ಯನವರಲ್ಲಿ ಇದಕ್ಕೊಂದು ಪರಿಹಾರವಿದೆ ಎಂಬ ನಿರೀಕ್ಷೆಯಲ್ಲಿ ಮುಖವೆತ್ತಿ ಅವರ ಮುಖ ನೋಡಿದೆ. “ನೀನು ತಪ್ಪುತ್ತಿರುವುದು ನಿಜ. ಒಂದೇ ಬದಲಾವಣೆಯಾಗಬೇಕು. ಪ್ರತೀ ದಿನ ಮನೆಯವರೆಲ್ಲ ತಿಂಡಿ ತಿನ್ನುವಾಗ ಮತ್ತು ಊಟಮಾಡುವಾಗ ನೀನು ಬಂದು ಕೂಡಲೇ ಬೇಕು. ಅಷ್ಟೇ…ನಿನ್ನ ಊಟ ಮತ್ತು ತಿಂಡಿ ಮನೆಯವರೊಟ್ಟಿಗಾಗಬೇಕು” ಎಂದು ಸುಮ್ಮನಾದರು. ನಾನು ಕಣ್ಣೊರೆಸಿಕೊಂಡೆ.

ನಮ್ಮಲ್ಲಿಯ ಗಾದೆ ಹೀಗಿದೆ ” ಸಂಗತಿ ರುಚಿಯೋ, ಸಕ್ಕರೆ ರುಚಿಯೋ” ಅಂದರೆ, ಸಕ್ಕರೆಗಿಂತ ರುಚಿ ಎಲ್ಲರೂ ಕೂಡಿದಾಗ ; ಕೂಡಿ ಉಂಡಾಗ. ಭಾರತೀಯತನದಲ್ಲಿ ಮನುಷ್ಯನ ಸಮಾಜ ಪರಿಕಲ್ಪನೆಯ ಭದ್ರ ಅಂಶಗಳಿಗೆ ಇನ್ನೂ ಮಹತ್ವ ಉಳಿದಿರುತ್ತದೆ. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿ ಎಂದು ಹೊಗಳಿಕೊಳ್ಳುವುದು ಸಾಧ್ಯವಾಗಿದೆ. ಕಾಡ ಮನುಷ್ಯ ಸಾಮಾಜಿಕವಾಗಲು ಕಲಿತುಕೊಂಡದ್ದು ಗುಂಪಿನಲ್ಲಿ ಬದುಕಲು ಶುರುವಿಟ್ಟುಕೊಂಡಾಗ. ಆದರೆ ಇತ್ತೀಚೆಗೆ ಇದು ಕೇವಲ ಹೊಟ್ಟೆಪಾಡಿನ ವಿಷಯವಾಗಿದೆ. ಮನುಷ್ಯನಾದ ನಮಗೆ ಊಟ ಕೇವಲ ಹೊಟ್ಟೆ ತುಂಬಿಕೊಳ್ಳುವ ವಿಷಯವಲ್ಲ ಎನ್ನುವ ಅರಿವಿನ ಅವಷ್ಯಕತೆಯಿದೆ. ರಾತ್ರಿ ತಡವಾಗಿ ಮನೆಗೆ ಬಂದು ತ್ರೀಫ಼ೋರ್ಥ್ ಸಿಕ್ಕಿಸಿಕೊಂಡು ಅಮ್ಮನನ್ನು ಸ್ವಲ್ಪ ಮಾತನಾಡಿಸಿ ತಟ್ಟೆಗೆ ಎಲ್ಲವನ್ನೂ ಸುರಿದು (ನಮ್ಮ ಕಡೆ ಮಿಸಾಳು ಭಾಜಿ ಎನ್ನುವ ತಿಂಡಿಯೊಂದಿದೆ) ಹಾಲಿಗೆ ಬಂದು ಇಂಗ್ಲಿಷ್ ನಿವ್ಸ್ ಚ್ಯಾನಲ್ಲನ್ನು ಶೂನ್ಯದಲ್ಲಿ ನೋಡುತ್ತ ಊಟ ಮಾಡೂವುದು ಒಂದು ಪ್ಯಾಷನ್. ಯಾರೇ ಬಂದು ಮಾತನಾಡಿಸಿದರೂ ಮೊಬೈಲ್ ನಲ್ಲಿ ಏನನ್ನೋ ಒತ್ತುತ್ತ ಅವರಿಗೆ ಸುಮಾರಾದ ಉತ್ತರ. ಎಲ್ಲೋ ವಾರಕ್ಕೊಮ್ಮೆ ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡಿದರೆ ಅದೇ ದೊಡ್ಡದು. ಹಾಗಂತ ಅದೇ ಮನುಷ್ಯ ಪಾರ್ಟಿ ಪ್ರಿಯ. ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋಗುತ್ತಲೇ ಇರುವಾತ ಮನೆಯಲ್ಲಿ ಮಾತ್ರ ಏಕಾಂಗಿ ಊಟಗಾರ. ಅದಕ್ಕೇ ಹಲವರಿಗೆ ಮನೆಯವರಿಗಿಂತ ಸ್ನೇಹಿತರೇ ಅಚ್ಚುಮೆಚ್ಚು. ತಪ್ಪುತ್ತಿರುವುದೇ ಅಲ್ಲಿ. ನಮಗೆ ಅರಿವಿಲ್ಲದೆಯೇ ಕುಟುಂಬದಿಂದ ದೂರ ಸರಿಯುತ್ತ ಸಾಗುವಾಗ ಅದನ್ನು ಗ್ರಹಿಸದೇ ಹೋದಲ್ಲಿ ನಾವು ಮತ್ತೆ ಬದಲಾಗಲು ಸಾಧ್ಯವಾಗದ ಹಂತಕ್ಕೆ ಅತೀ ಬೇಗನೆ ತಲುಪಿಬಿಡುತ್ತೇವೆ. ಅದೆಲ್ಲದರ ನಡುವೆ ಅದೇನನ್ನೋ ತಿಳಿಯದೇ ಕಳೆದುಕೊಂಡುಬಿಡುತ್ತೇವೆ. ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ಅಂತರವೇ ಇಂಥಹ ಚಿಕ್ಕ ಚಿಕ್ಕ ವಿಷಯಗಳು ಹುಟ್ಟಿಹಾಕುವ ದೊಡ್ಡ ದೊಡ್ಡ ಅಂತರಗಳು. ಈ ಅಂತರಗಳನ್ನು ಅರಿಯದೇ ಹೋದಲ್ಲಿ ನಾವು ಜಾನುವಾರುಗಳಂತೆ ವರ್ತಿಸಲು ಶುರುವಿಟ್ಟುಕೊಳ್ಳುತ್ತೇವೆ. ಕೆಲವೊಂದು ಸೂಕ್ಷ್ಮಗಳು ನಮ್ಮ ಕೌಟುಂಬಿಕ ಸಂಬಂಧಗಳನ್ನು ಬಹುವಾಗಿ ನಿಗ್ರಹಿಸುತ್ತವೆ. ಪ್ರತೀ ದಿನ ಯಾವಾಗಲೂ ಮನೆಯವರೆಲ್ಲ ಸೇರಿ ಒಟ್ಟಿಗೆ ಊಟ ಮಾಡಿ. ಸಾಧ್ಯವಾದಲ್ಲಿ ಒಂದು ಊಟವಾದರೂ ಕೂಡಿ ಮಾಡಿ ಅಥವಾ ಕೊನೆಯಲ್ಲಿ ಒಂದು ತಿಂಡಿ ಒಟ್ಟಿಗಾಗಲಿ. ಸಾಧ್ಯವಿಲ್ಲವೆನ್ನುವ ಯಾವುದೇ ಸಣ್ಣ ಸಬೂಬು ನಿಮ್ಮನ್ನು ಸಮಾಧಾನಪಡಿಸದಿರಲಿ. ಬದಲಾವಣೆಯನ್ನು ನನಗೆ ಹೇಳಿ.

ಮನುಕುಲದೆಡೆಗಿನ ಒಂದಿಷ್ಟು ಕಾಳಜಿಯೊಂದಿಗೆ
-ಶಿಶಿರ ಹೆಗಡೆ.





ಒಂದು ಕಪ್ಪೆ , ಯೆಡ್ಯೂರಪ್ಪ ಮತ್ತು ಅಣ್ಣಾ ಹಜಾರೆ.

11 12 2011

ಅದೆಲ್ಲಿಯೋ ಓದಿದ ಕಥೆ ನೆನಪಾಗುತ್ತಿದೆ. ಒಂದು ಗುಂಪಿನ ಕಪ್ಪೆಗಳೆಲ್ಲ ಅದೆಲ್ಲಿಯೋ ಆಹಾರವನ್ನೋ ಇನ್ನೇನನ್ನೋ ಅರಸಿ ಹೊರಟಿದ್ದವು. ಒಂದರ ಹಿಂದೊಂದರಂತೆ ಹಾರಿ ನೆಗೆದು ಜಿಗಿದು ಎತ್ತೆತ್ತಲೋ ಸಾಗುವಂತೆ ಒಂದೇ ಗೊತ್ತು ಗುರಿಯಿಲ್ಲದೇ, ಉದ್ದೇಶವೊಂದೇ ಎಂಬಂತೆ ಸಾಗುತ್ತಲೇ ಇದ್ದವು. ಒಂದು ಮರದ ದಿಮ್ಮಿಯನ್ನು ಹತ್ತಿ ನೀರಿನ ಹೊಂಡವೊಂದನ್ನು ದಾಟುತ್ತಿರುವಾಗ ಫಕ್ಕನೆ ಆಯತಪ್ಪಿ ಎರಡು ಕಪ್ಪೆಗಳು ಕೆಳಗಿನ ಹೊಂಡಕ್ಕೆ ಬಿದ್ದು ಬಿಟ್ಟವು. ಎರಡೂ ಕಪ್ಪೆಗಳು ಅತಿ ಕಷ್ಟಪಟ್ಟು ನೆಗೆನೆಗೆದು ಹಾರಿ ಹೊರಬರಲು ಹರಸಾಹಸ ಪಡುತ್ತಿದ್ದವು. ಇದನ್ನು ನೋಡಿದ ಉಳಿದ ಕಪ್ಪೆಗಳು “ಹೊಂಡ ಬಹಳ ಆಳವಿದೆ, ಅಲ್ಲಿಯೇ ನೀವು ಆದಷ್ಟು ದಿನ ಬದುಕಿ ಸಾಯುವುದು ಉತ್ತಮ, ಅದಿಲ್ಲದೇ ಹೋದಲ್ಲಿ ವ್ಯರ್ಥ ಪ್ರಯತ್ನ ಮಾಡಿ ಸುಸ್ತಿನಲ್ಲಿ ಸಾಯುವುದು ಬೇಡ” ಎಂಬಿತ್ಯಾದಿ ಕೂಗಿಕೊಂಡವು. ಪ್ರಯತ್ನ ಮಾಡೀ ಸೋತು ಸಾಯುವುದಕ್ಕಿಂತ ಅಲ್ಲಿಯೇ ಇದ್ದ ಹುಳು-ಹುಪ್ಪಡಿಗಳನ್ನು ತಿಂದು ಆದಷ್ಟು ದಿನ ಬದುಕಿ ಸಾಯುವುದೇ ಉತ್ತಮವೆಂದು ಹಿರಿಯ ಕಪ್ಪೆಯೂ ಬುದ್ಧಿವಾದ ಹೇಳಿತು. ಇದನ್ನೆಲ್ಲ ಕೇಳುತ್ತಲೇ ಒಂದು ಕಪ್ಪೆ ಹಾರುತ್ತ ಹಾರುತ್ತ ಕೊನೆಗೆ ಸೋತು ಸತ್ತುಬಿದ್ದಿತು, ಆದರೆ ಇನ್ನೊಂದು ಕಪ್ಪೆ ಮಾತ್ರ ಮತ್ತೂ ನೆಗೆನೆಗೆದು ಹಾರುತ್ತಲೇ ಇತ್ತು. ಹಾರುತ್ತ ಹಾರುತ್ತ ತನ್ನ ಪ್ರಯತ್ನ ಮಾಡುತ್ತಲೇ ಇತ್ತು. ಕೊನೆಯ ನೆಗೆತದಲ್ಲಿ ತನ್ನ ಶಕ್ತಿಯನ್ನೆಲ್ಲ ಒಮ್ಮೆಲೇ ಬಳಸಿದಂತೆ ನೆಗೆದು ಮೇಲೆ ಬಂದು ಬಿಟ್ಟಿತು. ಆಗ ಮೇಲೆ ಇದ್ದ ಕಪ್ಪೆಗಳಿಗೆಲ್ಲ ಸಂತೋಷವೋ ಸಂತೋಷ. ಆಗ ಹಿರಿಯ ಕಪ್ಪೆ ಅದರ ಬಳಿ ಬಂದು ,”ನಾವೆಲ್ಲ ಬೇಡ ಬೇಡವೆಂದರೂ ನೀನು ನಿಲ್ಲದೇ , ಸಾವಿಗೆ ಅಂಜದೇ ನೆಗೆಯುತ್ತಲೇ ಯಶಸ್ವಿಯಾದೆಯಲ್ಲಾ, ನಿನಗೆ ಶಹಬಾಸ್”. ಆಗ ಜಯಿಸಿದ ಕಪ್ಪೆ ಹೀಗೆಂದಿತು,”ನಿಮಗೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು, ನನಗೆ ಕಿವಿ ಕೇಳುತ್ತಿಲ್ಲದಿದ್ದರೂ ನೀವು ಕೊಟ್ಟ ಪ್ರೋತ್ಸಾಹದಿಂದಲೇ ನಾನು ಹಾರಿ ಜಯಿಸಿ ಬರಲು ಸಾಧ್ಯವಾಯಿತು”.

ಈ ಕಥೆ ನೆನಪಾದಾಗ ಅಣ್ಣಾ ಹಜಾರೆಯವರ ಈಗಿತ್ತಲಾಗಿನ ಮಾತುಗಳು, ನಮ್ಮ ಯೆಡ್ಯೂರಪ್ಪನವರ ವಿಪಕ್ಷದ ಮೇಲಿನ ಮುನಿಸಿನ ನುಡಿಗಳು ಇವೆಲ್ಲ ಫಕ್ಕನೆ ಸ್ಮೃತಿಪಟಲದಲ್ಲಿ ಚಣಕಾಲ ನೆಲೆ ನಿಂತು ಸರಿದು ಹೋದವು.

- ಶಿಶಿರ ಹೆಗಡೆ





ಪಾತ್ರ-ಅಪಾತ್ರರ ನಡುವೆ…

12 11 2011

ನನ್ನ ಗೆಳೆಯನೊಂದಿಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದೆ. ನಾನು ಮತ್ತು ನನ್ನ ಸ್ನೇಹಿತ ಬಹುತೇಕವಾಗಿ ಕಾರಣವಿಲ್ಲದೇ ವಾಯುವಿಹಾರ ಮಾಡಿಕೊಂಡು ನಡೆದಾಡುವ ಜಾಯಮಾನದವರಲ್ಲದೇ ಹೋದದ್ದಾಗಿಯೂ ಆ ದಿನ ಸುಮ್ಮನೆ ನಡೆದುಕೊಂಡು ಹೊರಟಿದ್ದೆವು. ನಾನು ಬೆಂಗಳೂರಿಗೆ ಆಗ ಬಂದು ಇನ್ನೂ ಒಂದು ವರುಷ ಆಗಿರಲಿಲ್ಲವೇನೋ, ಆದರೆ ನನ್ನ ಗೆಳೆಯ ಸುಮಾರು ನಾಲ್ಕೈದು ವರ್ಷಗಳಿಂದ ಇಲ್ಲಿನ ಗಾಳಿತಿಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ. ನನಗೆ ಎಲ್ಲವೂ ಹೊಸತಾದರೂ ಯಾಕೋ ಹೊಸತೆಂದು ಅಥವಾ experience ಇಲ್ಲದವನ ರೀತಿಯಲ್ಲಿ ನಡೆದುಕೊಳ್ಳುವ ಮನಸ್ಸು ನನ್ನದಿರಲಿಲ್ಲ. ನಮ್ಮೆದುರಿನಲ್ಲಿ ನಡೆದಾಡುವ ಯಾವೊಬ್ಬರೂ ನನ್ನನ್ನು ’ಹೊಸಬ’ನೆಂದೆಂದುಕೊಳ್ಳಬಾರದು ಎಂಬ ಚಿಕ್ಕದೊಂದು ಆಸೆಯನ್ನು ನಾನು ಬಹು ಪ್ರಮುಖವೆಂಬಂತೆ ಪರಿಗಣಿಸಿದ್ದಿರಬಹುದು. ಹೀಗೆಲ್ಲದರ ನಡುವೆ ನಮ್ಮ ಧೂಳಿನ ವಿಹಾರ (ವಾಯು ವಿಹಾರವೆನ್ನುವಹಾಗೆ ನಮ್ಮ ಬೆಂಗಳೂರು ಆಗಲೇ ಇರಲಿಲ್ಲ ಬಿಡಿ) ಮುಂದುವರಿದಿತ್ತು , ದಿಕ್ಕು ದೆಸೆಯಿಲ್ಲದೆ.

ಆಗ ಕಾಣಿಸಿಕೊಂಡ ನನ್ನೆದುರಿನ ಒಂದು ದಂಪತಿಗಳನ್ನು ಬಹುಷ: ನಾನು ಜೀವಮಾನದಲ್ಲೆಂದೆಂದೂ ಮರೆಯಲಾರೆ. ಒಂದು ಪುಟ್ಟ ಕಂದನನ್ನು ಕೈಯಲ್ಲಿ ಹಿಡುದುಕೊಂಡವ ಮುಖಭಾವದಲ್ಲಿ ತೀರಾ ದೈನ್ಯನಾಗಿದ್ದ. ಆತನ ಹೆಂಡತಿ ಅಷ್ಟೇನೂ ಕಂಗಾಲಾದಂತಿರಲಿಲ್ಲ. ಗಂಡನೊಂದಿಗೆ ನಿಲ್ಲುವುದೇ ತನ್ನ ಕರ್ತವ್ಯವೆನ್ನುವಂತೆ ನಿಂತಿದ್ದಳು, ಮಗು ಮಾತ್ರ ಅತೀ ಶಾಂತವಾಗಿ ಸುತ್ತಲಿನ ಜಗತ್ತನ್ನೆಲ್ಲ ತನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿತ್ತು. ಅದು ಏನನ್ನೋ ಕಲಿಯುತ್ತಿದ್ದಂತಿತ್ತು. ಬೇಗ ಎಲ್ಲವನ್ನು ಕಲಿತುಬಿಡಬೇಕು ಎಂದು ಕಣ್ಣರಳಿಸಿ ಏನನ್ನೋ ಹುಡುಕಿದಂತೆ. ’ಸಾಹೇಬ್, ಆಪ್ಕೊ ಹಿಂದಿ ಆತೀಹೆ?’. ನಾನು ’ಹೌದು’ ಎಂದೆನ್ನುವಾಗಲೇ ನನ್ನ ಗೆಳೆಯ ನನ್ನನ್ನು ಕೈಹಿಡಿದು ಎಳೆದದ್ದು ನನ್ನಲ್ಲಿ ಅಸಹನೆ ತತ್-ಕ್ಷಣ ಹುಟ್ಟುಹಾಕಿದ್ದು ಇನ್ನೂ ನೆನಪಿದೆ. ಇದ್ದ ಐವತ್ತುರೂಪಾಯಿಯನ್ನು ಅವನಿಗೆ ಕೊಡುವವನಿದ್ದೆ. ಗೆಳೆಯ ಬಿಡಲಿಲ್ಲ. ಅವರೆದುರಿಗೇ ಅವರಿಗೆಲ್ಲ ಅವಮಾನವಾಗುವಂತೆ ಬೈದ. ಆ ಆಸಾಮಿ ’ಸಾರ್, ಕೊಯಿ ಪತಾ ನಹಿ ಹೆ, ವಾಪಸ್ ಗಾವ್ ಜಾನಾ ಹೆ, ಕುಚ್ ಹೆಲ್ಪ್ ಕರೊ ಭಯ್ಯಾ’ ಎಂದೆನ್ನುತ್ತಲೇ ಇದ್ದ. ’ಎಲ್ಲ ಮೋಸ ಕಣೋ’, ಎಂದು ನನ್ನನ್ನು ಎಳೆದುಕೊಂಡು ಹೊರಟ ನನ್ನ ಗೆಳೆಯ. ನನ್ನ ಮನಸ್ಸು ಯಾಕೋ ತಡೆಯಲಿಲ್ಲ ಆದರೆ ಗೆಳೆಯ ನನ್ನನ್ನು ತಡೆದ. ಹಾಗೆಯೇ ನಡೆದೆವು. ಈ ಥರಹದ ಮೋಸ ನಿಜವಿರಬಹುದು, ಆದರೆ ಆ ಜೋಡಿ ನಿಜವಾಗಿಯೂ ತೊಂದರೆಯಲ್ಲಿದ್ದಿದ್ದರೆ?
Twitter@iHegde
ಮನಸ್ಸು ಯಾಕೋ ಉಡುಪಿ ಹೊಟೆಲ್ಲಿನ ದೋಸೆ ಬೇಡವೆಂದಿತು. ದೋಸೆ ತಿನ್ನುವ ದುಡ್ಡಲ್ಲಿ ಆತ ಅದ್ಯಾವುದೋ ಊರಿಗೆ ತಲುಪುತ್ತಿದ್ದನೇನೋ ? ಆತನದೇ ಆದ ಮುಗ್ಧ ಜಗತ್ತು ಅವನನ್ನು ಕಾಯುತ್ತಿದೆಯೇನೋ ? ಗೊತ್ತಿಲ್ಲ. ಗೊಣಗಿಕೊಂಡೆ. ಗೆಳೆಯ ಕೇಳಿಸಿಕೊಂಡ. ಏನೂ ಉತ್ತರವಾಗಿ ಮಾತನಾಡಲಿಲ್ಲ, ಹಾಗೆಂದು ಕೋಪವನ್ನೂ ನನ್ನ ಮೇಲೆ ತೋರಿಸಲಿಲ್ಲ. ನನಗೆ, ನಾನು ಮೋಸ ಹೋಗುವವನಿದ್ದೆನೋ ಅಥವಾ ಅನ್ಯಾಯವಾಗಿ ಒಬ್ಬನನ್ನು ಕಷ್ಟದಲ್ಲಿ ಸಹಾಯ ಮಾಡಲು ನನ್ನಲ್ಲಿ ಸಾಧ್ಯವಿದ್ದರೂ ಕೈಬಿಟ್ಟು ಬಂದೆನೋ, ಒಂದೂ ಅರ್ಥವಾಗದ ಗೊಂದಲದಲ್ಲಿದ್ದೆ. ವಾಯು ವಿಹಾರ ಮುಗಿಸಿ ಅಥವಾ ಅದರ ಅರ್ಧವನ್ನು ಮುಗಿಸಿ ಇನ್ನರ್ಧಕ್ಕೋಸ್ಕರ, ವಾಪಸ್ ಹೊರಟಾಗ ಆ ಜೋಡಿ ಅಲ್ಲಿಯೇ ಸಿಕ್ಕರೆ ನನ್ನ ಗೆಳೆಯನನ್ನು ಒಪ್ಪಿಸಿ ಅವರಿಗೆ ಸಹಾಯ ಮಾಡಬೇಕೆಂದು ಗಟ್ಟಿ ಮನಸ್ಸು ಮಾಡಿಕೊಂಡೆ. ಆದರೆ ಅದನ್ನು ಗೆಳೆಯನ ಬಳಿ ಚರ್ಚಿಸಲು ಯಾಕೋ ಮನಸ್ಸಾಗಲಿಲ್ಲ. ನಾನಿನ್ನೂ ಆ ಜೋಡಿಯನ್ನು ಮೋಸದ ಜೋಡಿಯೆಂದು ಪರಿಗಣಿಸಿರಲಿಲ್ಲ. ಆ ಧೈರ್ಯ ನನಗಿರಲಿಲ್ಲ. ಹೋಗುವಾಗ ಕತ್ತಲು ಕ್ರಮೇಣ ಆಕ್ರಮಿಸುತ್ತಿತ್ತು. ಅದಾಗಲೇ ತಮ್ಮ ಬೆಳಗು ಶುರುವಾಗುತ್ತಿದೆಯೇನೋ ಎನ್ನುವಂತೆ ಬೀದಿಯಲ್ಲಿ ಹಾಕಿದ ಹೀಲಿಯಂ ದೀಪಗಳು ಕಣ್ಣುಜ್ಜಿಕೊಳ್ಳುತ್ತಿವೆ. ದೀಪದ ಹುಳ ಹುಪ್ಪಡಿಗಳೆಲ್ಲ ಕೆಲಸಕ್ಕೆ ಅಣಿಯಾಗುತ್ತಿದೆ. ಮರದಲ್ಲಿ ದಿನವಿಡೀ ಕಳೆದ ಹಲ್ಲಿಗೆ ಅದು ಕಂಬ ಏರುವ ಸಮಯ, ಊಟದ ಸಮಯ. ಹೀಗೆಲ್ಲ ವಾತಾವರಣ. ನಾವು ಕ್ರಮಿಸುತ್ತಿದ್ದೇವೆ. ಒಂದು ಕ್ಷಣ, ಅರೆ ಕತ್ತಲಲ್ಲಿ ಕ್ರಮಿಸಿ ಹೋದ ಜೋಡಿ ಅದೇ ಜೋಡಿಯೇ ? ಆ ಶೂನ್ಯದಲ್ಲಿ ಕಳೆಯದೇ ಹೋದ ವಸ್ತುವನ್ನು ಹುಡುಕುವ ಮುಗ್ಧತೆಯ ಅದೇ ಮಗುವೇ ? ಬೀದಿ ದೀಪದ ಅಸ್ಪಷ್ಟತೆ ಎಲ್ಲ ಮುಖವನ್ನು ಮರೆಸಿದಂತೆ. ಹೌದು ಅದೇ ಕೂಸಿನ ಮೊಗ, ಅದೇ ಹುಡುಕಾಟ. ಅದೇ ಜಗತ್ತನ್ನು ಅರಿಯುವ ಆತುರದಲ್ಲಿ ತಡಕಾಡುವ ಬೊಗಸೆಗಣ್ಣು. ಮತ್ತೆ ಹಿಂದಿನಿಂದ ’ಸಾರ್, ಆಪ್ಕೊ ಹಿಂದಿ ಪತಾಹೆ?’. ಆದರೆ ಈ ಬಾರಿ ಅಪ್ಪ ಅಮ್ಮ ಮಾತ್ರ ಬದಲಾದರೇ? ಹೌದು. ಇದೆಂಥಹ ವೈಚಿತ್ರ್ಯ? ಆ ಕ್ಷಣ. ಅಪ್ಪ-ಅಮ್ಮನೇ ಬದಲು, ಮಗು ಮಾತ್ರ ಅದೇ ! ಮನಸ್ಸೆಲ್ಲ ಜಗತ್ತಿಗೆ ಹೆದರಿದಂತೆ. ಆ ಕ್ಷಣ ಬಹುಷ: ನಾನು ಎಂದೂ ಮರೆಯಲಾರೆ. ನನಗೆ ಜೀವನದ ನೈಜತೆಯ ಅನುಭವದ ಗಳಿಗೆ. ಅದೊಂದು ಸಮಾಜವನ್ನು ಪ್ರೀತಿಸುವ ಮನಸ್ಸು ಕತ್ತು ಹಿಸುಕಿದಾಗ ಉಸಿರನರಸಿದಂತೆ. ಸಮಾಜವನ್ನು ಪತ್ರಿಕೆಗಳು, ಟಿವಿ ವಾಹಿನಿಗಳು ಅದೆಷ್ಟು ಕಟುವಾಗಿ ಟೀಕಿಸಿದರೂ ಅದನ್ನೆಲ್ಲ ಪೂರ್ಣವಾಗಿ ನಂಬಲು ಒಪ್ಪದ ಮನಸ್ಸು ಎಲ್ಲವನ್ನು ಸೋತ ಗಳಿಗೆಯದು. ಅದು ಒಂದು ಅತಿ ಚಿಕ್ಕ ಘಟನೆಯೇ ಇರಬಹುದು, ಆದರೆ ಅದು ನನಗೆ ಅಷ್ಟೂ ಚಿಕ್ಕದೆಂದು ಅದೆಂದೂ ಕಾಣಲೇ ಇಲ್ಲ. ಇದಕ್ಕೆಲ್ಲ ಕೆಲ ಕ್ಷಣಗಳ ಮೊದಲು ಸಹಾಯ ಮಾಡದೇ ಹೋದದ್ದಕ್ಕೆ ಮರುಕಗೊಂಡ ಮನಸ್ಸೇ ಕಾರಣವೇ ಅಥವಾ ಹೊಸದಾಗಿ ನನ್ನೆದುರಿಗೆ ಅದಾಗತಾನೆ ತೆರೆದುಕೊಳ್ಳುತ್ತಿರುವ ಸಮಾಜದ ನೈಜ ಮುಖವೇ?

ದಾನ ಅತೀ ಉತ್ತಮ ಕೆಲಸವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಪಾತ್ರರಿಗೆ ದಾನ ಮಾಡಿದರೆ ಮಹಾ ಪಾಪ ಎನ್ನುವುದು ಮನು ಉಕ್ತಿ. ಇವತ್ತು ಮಹಾನಗರಗಳಲ್ಲಿ, ಪಾತ್ರರಾರು, ಅಪಾತ್ರರಾರು ಎಂದು ಪುಟವಿಡಲು ಸಮಯ ಒಬ್ಬರಿಗೂ ಇಲ್ಲ. ಒಬ್ಬ ನಿಜವಾದ ಸಹಾಯದ ಅವಷ್ಯವಿರುವವನನ್ನು ನಾವು ಗುರುತಿಸಲಾರೆವು, ಯಾಕೆಂದರೆ ಇವತ್ತು ಮೋಸ ಮಾಡಿ ಲಪಟಾಯಿಸುವವ originalಗಿಂತ original.ಇವತ್ತಿನ ಬೆಂಗಳೂರಿನ ಸ್ಥಿತಿ ಹೇಗಿದೆಯೆಂದರೆ, ನೀರಿನಲ್ಲಿ ಬಿದ್ದ ಇರುವೆಯನ್ನೂ ಅನುಮಾನದಿಂದ ನೋಡುವಾಂತಾಗಿದೆ. ಮೋಸವನ್ನು ಬಿಡಲಾರದೇ ಬದುಕುತ್ತಿದ್ದೇವೆಯೇ ? ಮನುಷ್ಯತ್ವವನ್ನು ಹುಟ್ಟುಹಾಕುವ ಮೂಲ ಮಂತ್ರವಾದ ನಂಬಿಕೆಯೆಂಬ ಬೀಜ, ಮೋಸವೆಂಬ ಉರಿಬಿಸಿಲಿನ ಝ್ಹಳಕ್ಕೆ ಒಣಗಿಹೋಗಿದೆ. ಇದೆಲ್ಲ ನಮಗರಿವಿಲ್ಲದ ಹಾಗೆ ನಾವೇ ಕಟ್ಟಿಕೊಳ್ಳುತ್ತಿರುವ ಸಮಾಜ! ಇದೆಲ್ಲ ಬೇಡ. ಚೆನ್ನಾಗಿ ನಮ್ಮ ಸಮಾಜ ಕಟ್ಟಿಕೊಳ್ಳೋಣ. ನಿಜವಾದ ಅರ್ಥದಲ್ಲಿ ಬದುಕು ಕಟ್ಟುಕೊಳ್ಳೋಣ. ನಿಮ್ಮ ಮಕ್ಕಳು ಅಥವಾ ಇನ್ಯಾರೇ ಇರಲಿ, ಲಾಭ ನಿಮಗೇ ಆದರೂ ಮೋಸಕ್ಕೆ ಪ್ರೋತ್ಸಾಹಿಸುವುದು ಬೇಡ. ಕೊನೆಗೆ ನಿಮ್ಮ ಮಗು ಹುಡುಗಾಟಿಕೆಗೋ, ಶಾಲೆಯಲ್ಲಿನ ಇನ್ನೊಂದು ಮಗುವಿನ ವಸ್ತುವನ್ನು ಮನೆಗೆ ಕದ್ದು ತಂದರೆ ಯಬಡಾಸಿ ಹಲ್ಲು ಕಿಸಿಯಬೇಡಿ. ತಿದ್ದಿ – ಬುದ್ದಿ ಹೇಳಿ. ತಮಾಷೆಗೂ ಬೇರೆಯವರಿಗೆ ಮೋಸ ಮಾಡುವುದು ಬೇಡ.

-ಶಿಶಿರ ಹೆಗಡೆ





ಮಜಾದಲ್ಲಿ ಬದ್ಕಿ, Nothing Serious, ಹಾಗೆ ಸುಮ್ನೆ – ೧

21 08 2011

ಅದೆಲ್ಲವನ್ನು ಬಿಟ್ಟು ಬಹುಶ: ನಮಗೆ ಬದುಕಲು ಸಾಧ್ಯವೇ ಇಲ್ಲವೇನೋ! ಅದೆಲ್ಲಿಯೋ ಥಟ್ಟನೆ ಅದ್ಯಾರಿಗೋ ತಿಳಿಯದೇ ಕಾಲು ತಾಗಿಸಿಬಿಡುತ್ತೇವೆ. ಥಟ್ಟನೆ ಕೈಯಲ್ಲೇ ನಮಸ್ಕರಿಸುತ್ತೇವೆ. ಹಲವರು ಒಮ್ಮೆ ನಮಸ್ಕರಿಸಿದರೆ ಇನ್ನು ಕೆಲವರು ಮೂರ್ನಾಲ್ಕು ಬಾರಿ. ನಮ್ಮ ಸಂಸ್ಕೃತಿಯ ಪ್ರಕಾರ ನಾವು ಎದುರುಗಡೆ ಸಿಕ್ಕವರಿಗೆ ನಮಸ್ಕಾರ ಅಥವಾ ಹರಿ ಓಮ್ ಎನ್ನುವುದು ರೂಢಿ, ಈಗಿತ್ತಲಾಗೆ ಹೆಲ್ಲೋ ಎನ್ನುತ್ತೇವೆ ಬಿಡಿ. ಹರಿ ಓಮ್ ಎನ್ನುವಾಗ ಅದರ ಅರ್ಥವೇನೆಂದರೆ ಎದುರಿನ ದೇಹದಲ್ಲಿರುವ ಆತ್ಮವೆಂಬ ದೈವಕ್ಕೆ ನಮಸ್ಕರಿಸಿದಂತೆ. ಈ ಕಾಲು ತಾಕಿದಾಗ ನಮಸ್ಕಾರ ಮಾಡುವುದರ ಹಿನ್ನೆಲೆಯೂ ಎದುರಿನವರಿಗೆ ನಮಸ್ಕರಿಸಿದಂತೆ. Infact sorry ಎಂದಂತೆ. ದೇವ ಜಗತ್ಸರ್ವವ್ಯಾಪೀ ಎನ್ನುವ ಜನ ನಾವು.
ಆ ದಿನ ಬಸ್ಸಿನಲ್ಲಿ ಸಿಕ್ಕಾಪಟ್ಟೆ ಜನ ತುಂಬಿದ್ದರು. ಪ್ರತೀ ಬ್ರೇಕ್ ಗೂ ತಿಕ್ಕಾಟ ಬಯ್ದಾಟ ಸಹಜವೆಂಬಂತೆ ಜನರೆಲ್ಲ ಅದನ್ನು ಅದ್ಯಾವುದೋ ಒಂದು ಕಾಲದಿಂದ ನಡೆದು ಬಂದ ರೂಢಿಯಂತೆ ನಡೆಸಿಕೊಂಡು ಹೋಗುತ್ತಿದ್ದರು. ಅದರ ಮಧ್ಯೆ ಅಲ್ಲ್ಯಾರೋ ಇಬ್ಬರಿಗೆ ಜಗಳ ಹತ್ತಿ – ಜೋರಾಗಿ ಮತ್ತೆ ಶಾಂತವಾಯಿತು. ಜನರೆಲ್ಲ ಸಹಜವೆಂಬಂತೆ ತಮ್ಮ ತಮ್ಮ ವರಸೆಯಲ್ಲಿ ಯಾರದ್ದು, ತಪ್ಪು ಯಾರದ್ದು ಸರಿ ಎಂದು ವಿಮರ್ಷೆಗಿಳುದು ತೀರ್ಮಾನ ಕೊಟ್ಟೂ ಮುಗಿಯಿತು. ಇದೆಲ್ಲ ಆದ ಸ್ವಲ್ಪ ಹೊತ್ತಿನ ನಂತರ , ಆ ಜಗಳ ಆಡಿಕೊಂಡ ಒಬ್ಬನ ಕಾಲು ಅಕಾಸ್ಮಾತಾಗಿ ಇನ್ನೊಬ್ಬ ಜಗಳಭಾಗಿಗೆ ತಾಗಿಬಿಟ್ಟಿತು. ಆಗ ಆತ ಥಟ್ಟನೆ ಕೈಯ್ಯನ್ನೇನೋ ಮುಗಿದುಕೊಂಡ ಮತ್ತೆ ಪ್ರಕೃತಿ ಸಹಜ ಜಗಳ ಶುರುವಾಯಿತು. ಈತ ಕೈ ಮುಗಿದದ್ಯಾಕೆ ಮತ್ತೆ ಜಗಳ ಮಾಡಿದ್ಯಾಕೆ ! ಇದೆಲ್ಲ ಮಜಗಳ ಮಧ್ಯೆ ಬದುಕುವುದೇ ಒಂದು ದೊಡ್ದ ಮಜ ಬಿಡಿ.. ನೋಡಲು ಒಂದು ಕಣ್ಣು ಸಾಕು ಬದುಕಲು !





____ !!?!

30 07 2011

ಈ ದೇಶದಲ್ಲಿ ಒಂದೋ ಹಗರಣ ಇಲ್ಲವೇ ಒಂದು ಬಾಂಬ್ ಸ್ಪೋಟ ಸದಾ ಸುದ್ದಿಯಲ್ಲಿರುತ್ತದೆ. ಒಂದಕ್ಕೊಂದು ಕಾಯುತ್ತಿರುವಂತೆ, ಪೈಪೋಟಿಯಲ್ಲಿ. ಹಿಂದೆ ಹಗರಣಗಳೇ ಆಗಿಲ್ಲವೆಂತಲ್ಲ, ಹಗರಣ ಅಂದೂ ಇಂದೂ , ಹೀಗೆ ಜನ ಸುಮ್ಮನೇ ಕೂತರೆ ಎಂದೆಂದೂ ಹಗರಣವೇ ಗತಿ. ಭಾರತ ಘಾನಾ ದೇಶವಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಅಂದ ಹಾಗೆ ಘಾನಾ ಸ್ಕ್ಯಾಮ್(ಹಗರಣ)ಗಳ ದೇಶ ಎಂದೇ ಕರೆಯಲ್ಪಡುತ್ತದೆ. ಹುಚ್ಚಿ ಮದುವೆಯಲ್ಲಿ ಮೊದಲು ಉಂಡವನೇ ಜಾಣವೆಂಬಂತೆ, ಇಂದು ನಮ್ಮ ರಾಜಕಾರಣಿಗಳು ಒಂದು ಹಗರಣ ಮಾಡಿ ಕೂತುಬಿಡುತ್ತಿರುವುದನ್ನು ಜನ ಒಪ್ಪಿಕೊಳ್ಳುತ್ತಿರುವ ಮನೋಭಾವ ವಿಪರ್ಯಾಸವೇ. ಒಂದು ಕೋಟಿಯಷ್ಟು ಬೃಹತ್ ಮೊತ್ತ ಹಗರಣಗಳ ವಿಷಯಕ್ಕಿಳಿದರೆ ಒಂದು ಮೊತ್ತವೇ ಅಲ್ಲವೆಂಬ ಮನೋಭಾವ. ಅದರಲ್ಲೂ ಈ 2G Spectrum ಮತ್ತು ಗಣಿ ಹಗರಣದ ಮುಂದೆ ಚಿಕ್ಕಪುಟ್ಟ ಬೆರಳೆಣಿಕೆಯ ಕೋಟಿಗಳೆಲ್ಲ ಲೆಕ್ಕವೇ ಅಲ್ಲವೆಂಬ ಅಸಡ್ಡೆ ಜನರಲ್ಲಿ ಒಂದು ಜಡ್ಡು ತಂದು ಹಾಕಿಬಿಟ್ಟಿದೆ. ಅತ್ತ ಲೋಕ್ ಪಾಲ್ ಬಿಲ್ ಕೂಡ ನಮಗೆ ಏನೆಂದೇ ಗೊತ್ತಿಲ್ಲದಿದ್ದರೂ ಅದೇನೋ ಬ್ರಷ್ಟಾಚಾರದ ವಿರುದ್ಧ ಎಂದು ಎಲ್ಲರೂ ಅದಕ್ಕಾಗಿ ಪಣತೊಟ್ಟು ನಿಂತೆವು. ಅದು ಸದನದಲ್ಲಿ ಪಾಸ್ ಕೂಡ ಆಯಿತು. ಕಾಂಗ್ರೆಸ್ ಕಣ್ಣೊರೆಸುವ ತಂತ್ರ ಫಲಕಾರಿಯಾಯಿತು. ಅದರಲ್ಲೇನಿದೆ, ಅಣ್ಣಾ ಹಜಾರೆ ಕೇಳಿದ್ದೇನು ಆದರೆ ಕೊನೆಗೆ ಅಂಗೀಕಾರವಾದ ಮಸೂದೆಯೇನು ಎಂಬುದು ಜನಸಮಾನ್ಯನಿಗೆ ತಿಳಿದಿರದಿದ್ದುದು ಕಂಗ್ರೆಸ್ಸಿಗರ, ಪ್ರಧಾನಿಯ ಬಂಡವಾಳ. ಮತ್ತೆ ಸುಪ್ರೀಮ್ ಕೋರ್ಟ್ ಕೂಡ ಅಣ್ಣನಿಗೆ ಉಪವಾಸ ಕೂರಲು ದೆಹಲಿಯಲ್ಲಿ ಅವಕಾಶ ನಿರಾಕರಿಸಿ ಭಾರತ ಸರಕಾರೀ ಕಳ್ಳರ ಸಂಪೂರ್ಣ ಬೆಂಬಲಕ್ಕೆ ನಿಂತಂತಿದೆ.

ಒಟ್ಟಾರೆಯಾಗಿ ಮತ್ತೆ ಮತ್ತೆ ನಮ್ಮೆಲ್ಲರ ತಾಳ್ಮೆಯನ್ನು ಜನ ನಾಯಕರು ಕೆಣಕುತ್ತಲೇ ಇದ್ದಾರೆ. ಜನ ಮಾತ್ರ ಒಂದು ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಸಿಕ್ಕಲ್ಲಿ ವ್ಯವಸ್ಥೆಯ ಬಗ್ಗೆ ಬೈದುಕೊಳ್ಳುತ್ತ ಆಯಕರ ಕಟ್ಟುತ್ತ ಜೀವನ ಸಾಗಿಸುತ್ತಿದ್ದಾರೆ. ಟ್ವಿಟರಿನಲ್ಲಿ ಹಲವರು ತಮ್ಮ ವ್ಯಾಕುಲತೆಯನ್ನು ಹೊರಹಾಕಿದರೆ ಇನ್ನು ಹಲವರು ತಮ್ಮ ಅಸಹಾಯಕತೆಯನ್ನು ಹೊರಹಾಕುತ್ತಾರೆ. ಇದು ಯಾವುದೇ ಹಗರಣ ಅಥವಾ ಬಾಂಬ್ ಸ್ಪೋಟವಾದಾಗ ಕಂಡುಬರುವಂಥದ್ದು ಸಮಾನ್ಯವೇನೋ ಎಂದೆನಿಸಿಬಿಡುವುದು. ಜನ ಸಾಮಾನ್ಯನಿಗೆ ಎಲ್ಲವೂ ಸಮಾನ್ಯವೆಂದೇ ಪರಿಗಣಿಸಬೇಕು ನಮ್ಮ ದೇಶದಲ್ಲಿ. ವಿಶೇಷವಾಗಿ ನನಗೆ ನಮ್ಮ ದೇಶವನ್ನು ಬಯ್ದುಕೊಳ್ಳಲು ಮನಸ್ಸಿಲ್ಲ. ಆದರೆ ಒಮ್ಮೊಮ್ಮೆ frustration ಮಿತಿ ಮೀರುತ್ತದೆ. ಇಷ್ಟೆಲ್ಲವಾದರೂ ಜನರು ಯಾಕೆ ಬೀದಿಗಿಳಿಯುತ್ತಿಲ್ಲ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ.

ಅದೆಲ್ಲ ಬಿಡಿ. ಇವೆಲ್ಲ ನನ್ನ ಪ್ರಶ್ನೆಯೇ ಅಲ್ಲ. ನನ್ನ ಪ್ರಶ್ನೆ ನೇರ -
೧. ಹಗರಣಗಳಲ್ಲಿ ನುಂಗಿ ಹಾಕಿದ ಹಣಗಳನ್ನು ಯಾಕೆ ಅಷ್ಟು ಸಲೀಸಾಗಿ ಈ ವ್ಯವಸ್ಥೆಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗದು ?
೨.ಒಬ್ಬ ಲಂಚ ತೆಗೆದುಕೊಂಡ ಅಥವಾ ಹಗರಣದಲ್ಲಿ ಭಾಗಿಯಾಗಿ ದುಡ್ಡು ಹೊಡೆದವ ಅದರಲ್ಲಿ ಒಂದಿಷ್ಟು ಹಣವನ್ನು ಮೋಜು ಮಾಡಿ ಅಥವಾ ಇನ್ನೇನೋ ಮಾಡಿ ಉಡಾಯಿಸಿರುತ್ತನಲ್ಲಾ, ಅದನ್ನು ಹೇಗೆ ಹಿಂದಕ್ಕೆ ಸರಕಾರ ಪಡೆಯುತ್ತದೆ?
೩. ಕದ್ದ ಮಾಲನ್ನು ಕಳ್ಳ ಯಾವತ್ತೂ ಅರ್ಧ ರೇಟಿಗೆ ಮಾರಿಕೊಳ್ಳುತ್ತಾನೆ ಎಂಬುದು ಸಾರ್ವಕಾಲಿಕ. ಗಣಿ ಹಗರಣದಲ್ಲಿ ಗಣಿಗೆ ತಕ್ಕ ಮೊತ್ತ ಸರಕಾರಕ್ಕಲ್ಲದಿದ್ದರೂ at least ನಮ್ಮ ದೇಶಕ್ಕೆ ತಲುಪಿದೆಯೋ ಅಥವಾ ಕದ್ದ ಮಾಲಿನಂತೆ ಗಣಿಗಳ್ಳರು ಅದನ್ನೂ ಸಿಕ್ಕ ರೇಟಿಗೆ ಮಾರಿದ್ದಾರೋ? ಹಾಗೊಮ್ಮೆಯಾದರೆ ಅದು ನಿಜಕ್ಕೂ ದೇಶಕ್ಕೆ ಲಾಸ್, ಇಲ್ಲದಿದ್ದರೆ at least ಹಣ ಭಾರತದಲ್ಲಿಯೇ ಇದೆ ಎಂದಾದರೂ ಸಮಾಧಾನ ಮಾಡಿಕೊಳ್ಳಬಹುದು.
೪.ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಾನು ಕೋಟಿ ಹಣವನ್ನು ಇಡುತ್ತಾರೆ, ಆದರೆ ಅದನ್ನು ಅಲ್ಲಿಗೆ ಹೇಗೆ ಸಾಗಿಸಲಾಗುತ್ತದೆ ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ.
೫……. ಯಾಕೆ ನನಗೆ ಪದೇ ಪದೇ ಈ ಹಾಡು ನೆನ್ಪಾಗ್ತ ಇರೊತ್ತೆ ???? –”ಈ ದೇಶದ್ ಕಥೆ ಇಷ್ಟೇ ಕಣಮ್ಮೋ, ಇಲ್ ಚಿಂತೆ ಮಾಡಿ ಲಾಭಾ ಇಲ್ಲಮ್ಮೋ”…

ಮತ್ತೇನ್ ಹೆಳ್ಲಿ…?
ನೀವು ಹಿಂದಿಯ wednesday ಎಂಬ ಚಲನಚಿತ್ರವನ್ನು ನೋಡಿರಬಹುದು, ಇಲ್ಲವಾದರೆ ಒಮ್ಮೆ ನೋಡಲೇ ಬೇಕಾದ ಚಿತ್ರವದು.

(ಕ್ಷಮಿಸಿ , ಇದು ಅಪೂರ್ಣ ಲೇಖನ.. ರಾಜಕೀಯದ ಬಗ್ಗೆ ಬರೆಯೋಕೆ ಬೇಜಾರಾಗಿ ಇದನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ)








Follow

Get every new post delivered to your Inbox.