ಫಾರಿನ್ ರಿಟರ್ನ್ ಗಳು ಆಗಾಗ ಅಲ್ಲಿನ ವ್ಯವಸ್ಥೆ ಮತ್ತು ಇಲ್ಲಿನ ಅವ್ಯವಸ್ಥೆಗಳನ್ನು ಪ್ರಸ್ತಾಪಿಸುವುದುಂಟು. ಹಾಗೆಲ್ಲ ಪ್ರಸ್ತಾಪಿಸಿದಾಗ ನಮಗೆ ಮಾತ್ರ ಅದೆಲ್ಲಿಯೋ ಅಡಗಿ ಕುಳಿತ ದೇಶಾಭಿಮಾನ ಎದುರಿಗೆ ಬಂದು ನಮ್ಮನ್ನೇ ಕೆಣಕುತ್ತವೆ. ವಿದೇಶದಲ್ಲಿನ ವ್ಯವಸ್ಥೆಯನ್ನು ಹೊಗಳಿದಾಗ ಮತ್ತು ನಮ್ಮ ಅದೇ ವ್ಯವಸ್ಥೆಯನ್ನು ತೆಗಳಿದಾಗ ದೇಶಪ್ರೇಮ ನಮ್ಮೆದುರಿಗೆ ಧುತ್ತೆಂದು ನಿಲ್ಲುತ್ತದೆ. ಜಾಸ್ತಿ ಏನಾದರು ಆ ಫಾರಿನ್ ರಿಟರ್ನ್ ಹೇಳಿದರೆ ಆತನನ್ನೆ ಏನದರೂ ಹೀಯಾಳಿಸುತ್ತೇವೆ ಇಲ್ಲವೇ “ನಮ್ ದೇಶ ಹೀಗೆ ಮಾರಾಯಾ” ಎಂದು ಹೇಗಾದರೂ ಬಾಯಿಮುಚ್ಚಿಸುತ್ತೇವೆ. ಅಲ್ಲೊಂದು ಸಮಸ್ಯೆಯ ಬಗ್ಗೆ ಚರ್ಚೆ ನಡೆಯದೇ ಹೋಗುತ್ತದೆ. ಮೂಲದಲ್ಲಿ ಸಮಸ್ಯೆಯಿಂದ ನಾವು ದೂರ ಸರಿಯಲು ಪ್ರಯತ್ನಿಸುತ್ತೇವೆಯೇ ಅಥವಾ ಸಮಸ್ಯೆ ಭಾರತದ ಮಟ್ಟಿಗೆ ಬಗೆಹರಿಯದ ಸಮಸ್ಯೆಯೆಂದು ಒಪ್ಪಿಕೊಂಡುಬಿಡುತ್ತೇವೆಯೇ ?
ನಮ್ಮ ರಾಜಕಾರಣಿಗಳು ಪದೇ ಪದೆ ವಿದೇಶ ಪ್ರಯಾಣ ಮಾಡುತ್ತಿರುತ್ತಾರೆ. ವಿದೇಶಕ್ಕೆ ಹೋಗಿ ಅಲ್ಲಿನ ಕನ್ನಡಿಗರ ಸಂಘಗಳು ಇಟ್ಟುಕೊಳ್ಳುವ ಒಂದಿಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೊದಲೇ ನಿಯೋಜಿಸಲ್ಪಟ್ಟ ಒಂದಿಷ್ಟು ಪ್ರವಾಸಿತಾಣಗಳಿಗೆ ಭೇಟಿ ಕೊಡುತ್ತಾರೆ. ಒಂದಿಷ್ಟು ದಿನ ಗುಂಡುಹಾಕಿಕೊಂಡು ಮಜಾ ಮಾಡಿ ಹಿಂದಿರುಗುತ್ತಾರೆ. ಇನ್ನೂವರೆಗೆ ನಾನು ಯಾವುದೇ ಮಂತ್ರಿಯೊಬ್ಬ ಒಂದು ಚಿಕ್ಕ ವಿಚಾರವನ್ನೂ ವಿದೇಶದಲ್ಲಿ ಅರಿತು ಕಲಿತು ಇಲ್ಲಿಗೆ ಬಂದು ಅದನ್ನು ಅನುಷ್ಠಾನಗೋಳಿಸಿದ್ದು ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ಹೀಗಿರುವಾಗ ಶಾಸಕರ ಮತ್ತು ಮಂತ್ರಿಗಳ ವಿದೇಶಪ್ರಯಾಣದ ಔಚಿತ್ಯವೇನು ? ಈಗಿತ್ತಲಾಗೆ ನಮ್ಮ ಸಮೂಹ ಮಾಧ್ಯಮಗಳು ಇದೇ ಪ್ರಶ್ನೆಯನ್ನು ಮಂತ್ರಿಗಳ ಮುಂದೆ ಇಡುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಆದ್ದರಿಂದಲೇ ಏನೋ, ಯಾವುದೇ ಮಾಧ್ಯಮಗಳಿಗೆ ಸುಳಿವು ಕೊಡದೇ ಹಲವು ಮಂತ್ರಿಗಳು ಈಗೀಗ ವಿದೇಶಕ್ಕೆ ಹೋಗಿ ಬರುತ್ತಿದ್ದಾರೆ.
ಮುಖ್ಯಮಂತ್ರಿಯಾದವರು ಈ ಮಂತ್ರಿಗಳ ವಿದೇಶ ಪ್ರಯಾಣಕ್ಕೆ ಅಡ್ಡಗಾಲು ಹಾಕುವಂತಿಲ್ಲ. ಬೇಕಾಗಲೀ ಅಥವಾ ಸಖಾ ಸುಮ್ಮನೆಯಾಗಲಿ, ಶಾಸಕರ ಮಂತ್ರಿಗಳ ವಿದೇಶೀ ಪ್ರಯಾಣವನ್ನು ಅನುಮೋದಿಸಲೇ ಬೇಕು. ಇಲ್ಲದಿದ್ದರೆ ಅಲ್ಲೊಂದು ಅಸಮಾಧಾನ, ಭಿನ್ನಮತ ಎದುರಿಸಬೇಕಾಗುವ ಮುಖ್ಯಮಂತ್ರಿಯಾದರೂ ಇನ್ನೇನು ಮಾಡಿಯಾರು ? At least , ಮಂತ್ರಿಯಾದವನು ಒಂದೇ ಒಂದು ಉತ್ತಮ ಕಾರ್ಯವನ್ನು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಇಲ್ಲಿಗೆ ಬಂದು ಅನಿಷ್ಠಾನ ಮಾಡಿದ್ದಿದ್ದರೆ ಇಷ್ಟೋತ್ತಿಗೆ ಈ ದೇಶ ಇನ್ಹ್ಯಾಗೋ ಇರುತ್ತಿತ್ತು. ಈ ಮಂತ್ರಿಗಳ ವಿದೇಶೀ ಪ್ರಯಾಣವನ್ನು ಪ್ರಶ್ನಿಸಿವವರ್ಯಾರು ? ವಿದೇಶಕ್ಕೆ ಹೋಗಿ ಬಂದ ಮಂತ್ರಿ ಎಂದಾದರೂ ತಾನಿಂತದ್ದೊಂದನ್ನು ನೋಡಿ ಬಂದೆ, ಅದನ್ನು ಇಲ್ಲಿ ಅನುಷ್ಠಾನ ಮಾಡಬಹುದು ಎಂದು ಒಮ್ಮೆಯಾದರೂ ಉಸುರಿದ್ದಾನೆಯೇ? ಪ್ರಜೆಗಳ ಹಣದಲ್ಲಿ ವಿದೇಶಕ್ಕೆ ಹೋಗಿ ಮಜಾ ಮಾಡಿ ಬರುವ ಈ ಮಂತ್ರಿಗಳಿಗೆ ಪಾಪ ಪ್ರಜ್ನೆ ಕಾಡುವುದೇ ಇಲ್ಲವೇ ?
ಯಾಕೆ ನಮ್ಮ ಮಂತ್ರಿಗಳಿಗೂ ಮತ್ತು ಫಾರಿನ್ ರಿಟರ್ನ್ ಗಳಿಗೂ ಒಮ್ಮೆ ಹೋಲಿಸಿ ನೋಡಬಾರದು ? ಫಾರಿನ್ ರಿಟರ್ನುಗಳು ಬೇರೆ ಯಾರೂ ಅಲ್ಲವಲ್ಲ. ಅವರೂ ಕೂಡ ನಮ್ಮ ನಿಮ್ಮಂತೆಯೇ ಇದೇ ದೇಶದ ಒಬ್ಬ ಸಾಮಾನ್ಯ ಪ್ರಜೆಯೇ. ಅವಕಾಶ ಮತ್ತು ವಿದ್ಯೆಯಿಂದ ನಮ್ಮಲ್ಲಿಗಿಂತಲೂ ಉತ್ತಮವಾದ ಇನ್ನೊಂದು ವ್ಯವಸ್ಥೆಯಲ್ಲಿ ಅವರು ಕೆಲಸಕ್ಕೋ ಅಥವಾ ವಾಣಿಜ್ಯೋದ್ದೇಶಕ್ಕೋ ತೆರಳಿ ವಾಪಸ್ ಬಂದವರಷ್ಟೇ. ಅದರಲ್ಲಿ ಯಾವುದೇ ತಪ್ಪು ನನಗಂತೂ ಕಾಣಿಸುತ್ತಿಲ್ಲ. ಇಷ್ಟಕ್ಕೂ ಎಲ್ಲ ಫಾರಿನ್ ರಿಟರ್ನ್ ಗಳೂ ತಾನು ವಿದೇಶಕ್ಕೆ ಹೋಗಿ ಹಿಂದಿರುಗಿ ಬಂದವನೆನ್ನುವ ಅಹಂ ನಿಂದ ಅಲ್ಲಿನ ವ್ಯವಸ್ಥೆಯನ್ನು ಹೊಗಳುವುದಾಗಲೀ ಅಥವಾ ಇಲ್ಲಿನ ವ್ಯವಸ್ಥೆಯನ್ನು ತೆಗಳುವುದಾಗಲೀ ಮಾಡುತ್ತಾನೆಯೇ ? ಖಂಡಿತ ಒಪ್ಪುವ ಮಾತಲ್ಲ. ಅಲ್ಲೊಂದು ಅಸಮಾಧಾನ ಹುಟ್ಟಿಕೊಂಡಿರುವುದು ತನ್ನ ದೇಶದ ಮಟ್ಟಿಗೆ ಆತ ಇಟ್ಟುಕೊಂಡಿರುವ ಪ್ರೇಮದಿಂದಾಗಿ ಅಲ್ಲವೇ. ಯಾಕೆ ನಮ್ಮ ದೇಶವೂ ಹಾಗಾಗಬಾರದು ಎಂಬ ಒಂದು ಹಂಬಲದಿಂದಾಗಿ ಆಡಿದ ಮಾತುಗಳಲ್ಲವೇ ? ಆತನ ಮಾತುಗಳು ನಮ್ಮ ಮನಸ್ಸಿನಲ್ಲೊಂದು ನಿರಾಸೆಯನ್ನು ಮೂಡಿಸುತ್ತವೆ, ಅದಕ್ಕೆ ಕೂಡ ಕಾರಣ ನಮ್ಮಲ್ಲಿನ ದೇಶದ ಬಗೆಗಿನ ಉತ್ಕಟ ಪ್ರೇಮವೇ ಹೊರತು ಇನ್ನೊಂದಲ್ಲ. ಹೀಗೆ ಒಬ್ಬ ಸಾಮಾನ್ಯ ಪ್ರಜೆಯೊಬ್ಬ ವಿದೇಶದಲ್ಲಿ ಅಲ್ಪಕಾಲ ನೆಲೆಸಿ ಅಲ್ಲಿ ಓಡಾಡಿದಾಗಲೆಲ್ಲ ಆತ ಹೆಜ್ಜೆ ಹೆಜ್ಜೆಗೂ ತನ್ನ ದೇಶದ ಬಗ್ಗೆಯೇ ವಿಚಾರ ಮಾಡುತ್ತಿರುತ್ತಾನೆ. ಒಂದು ಉತ್ತಮ ವ್ಯವಸ್ಥೆಯನ್ನು ನೋಡಿದಾಗಲೆಲ್ಲ ಇದ್ಯಾಕೆ ನಮ್ಮ ದೇಶದಲ್ಲಿಲ್ಲವೆಂದು ಅಂದುಕೊಳ್ಳುತ್ತಾನೆ. ಯಾಕೆ ಹೀಗೊಂದು ಉತ್ತಮ ವ್ಯವಸ್ಥೆಯನ್ನು ನಮ್ಮದಾಗಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆಯೆಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತಿರುತ್ತಾನೆ. ಆದರೆ ಪ್ರಜೆಗಳ ದುಡ್ಡಿನಲ್ಲಿ ಪುಕ್ಕಟೆ ವಿದೇಶ ಸುತ್ತುವ ರಾಜಕಾರಣಿಗಳಿಗೆ ಈ ಪ್ರಶ್ನೆಯು ಏಳುವುದೇ ಇಲ್ಲವೇ ? ಯಾಕೆ ವಿದೇಶಕ್ಕೆ ಹೋದಾಗ ಅಲ್ಲಿನ ವ್ಯವಸ್ಥೆಯನ್ನು ಸವಿಯುತ್ತಲೇ ಕಾಲಹರಣ ಮಾಡಿಬಿಡುತ್ತಾರೆ ನಮ್ಮ ಮಂತ್ರಿವರ್ಯರು! ಅದೇ ಜನಸಾಮಾನ್ಯನಿಂದ ಮಂತ್ರಿ ಪದವಿಗೆ ಏರಿದ ಒಬ್ಬ ಮನುಷ್ಯ ರಾಜಕಾರಣವೆಂಬ ಹೊಲಸು ವ್ಯವಸ್ಥೆಯಿಂದ interval ಪಡೆಯಲು ವಿದೇಶ ಪ್ರಯಾಣ ಬೆಳೆಸುತ್ತಾನೆಯೇ ? ಈ ಮಂತ್ರಿಗಳನ್ನು ಪ್ರಶ್ನಿಸುವವರ್ಯಾರು ?
ಒಂದಿಷ್ಟು ವ್ಯವಸ್ಥೆಯ ಅವ್ಯವಸ್ಥೆಯ ಜಡ್ಡಿನ ಮೈದಡವುತ್ತ…
ಶಿಶಿರ ಹೆಗಡೆ

